ADVERTISEMENT

ಪಾವತಿಯಾಗದ ಸಂಭಾವನೆ ಮೌಲ್ಯಮಾಪಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:36 IST
Last Updated 24 ಏಪ್ರಿಲ್ 2019, 19:36 IST

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ ಅಧ್ಯಾಪಕರ ಖಾತೆಗಳಿಗೆ ಇನ್ನೂ ಸಂಭಾವನೆ ಮೊತ್ತ ಪಾವತಿ ಆಗದಿರುವುದರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಮೌಲ್ಯಮಾಪನ ನಡೆಸಿದ ದಿನದ ಕೊನೆಯಲ್ಲೇ ಸಂಭಾವನೆಯನ್ನು ಚೆಕ್‌ ಮೂಲಕ ಪಾವತಿಸಲಾಗುತ್ತಿತ್ತು. ಆದರೆ, ಈ ಬಾರಿ ಫಲಿತಾಂಶ ಪ್ರಕಟವಾಗಿ 10 ದಿನ ಕಳೆದರೂ ಸಂಭಾವನೆ ಸಂದಾಯವಾಗಿಲ್ಲ ಎಂದು ಅಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಆನ್‌ಲೈನ್‌ ಮೂಲಕವೇ ಸಂಭಾವನೆ ಮೊತ್ತವನ್ನು ಪಾವತಿಸಲಾಗುವುದು ಎಂದು ಬ್ಯಾಂಕ್‌ ಖಾತೆಯೂ ಸೇರಿದಂತೆ ಎಲ್ಲ ವಿವರಗಳನ್ನು ಪಡೆದಿದ್ದರು. ಇಲ್ಲಿಯವರೆಗೂ ಪಾವತಿಯಾಗಿಲ್ಲ. ಇಲಾಖೆ ಅಧಿಕಾರಿಗಳು ವಿಳಂಬಕ್ಕೆ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ ಎಂದರು.

ADVERTISEMENT

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 3 ಗಂಟೆಗಳ ಅವಧಿಗೆ ₹ 30 ನೀಡಲಾಗುತ್ತಿದೆ. ಪ್ರತಿ ವರ್ಷ ಶೇ 10 ರಷ್ಟು ಹೆಚ್ಚಿಸಲು ಹಿಂದಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಕಳೆದ ವರ್ಷ ಸಂಭಾವನೆಯನ್ನು ₹ 30 ಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷವೂ ಅದೇ ಸಂಭಾವನೆ ಇದೆ. ಅದನ್ನು ₹33ಕ್ಕೆ ಹೆಚ್ಚಿಸಬೇಕು ಎಂಬುದು ಅಧ್ಯಾಪಕರ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಈ ವರ್ಷ ಅಂಕಗಳನ್ನು ನೇರವಾಗಿ ಸರ್ವರ್‌ಗೆ ನಮೂದು ಮಾಡುವ ಹೊಣೆಗಾರಿಕೆಯನ್ನೂ ಮೌಲ್ಯಮಾಪಕರಿಗೇ ನೀಡಲಾಗಿತ್ತು. ಇದರಿಂದ ಕಾರ್ಯಭಾರ ಹೆಚ್ಚಾಗಿತ್ತು. ಆದ ಕಾರಣ ಸಂಭಾವನೆಯನ್ನು ಶೇ 30ರಷ್ಟು ಹೆಚ್ಚಿಸಲೇ ಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಒತ್ತಡ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ಪ್ರತಿ ದಿನ 24 ಉತ್ತರ ಪತ್ರಿಕೆಗಳ ಬದಲಿಗೆ 20 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾತ್ರ ಮಾಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.