ಬೆಂಗಳೂರು: ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ನಿಗೂಢ ಕಣ್ಮರೆಯಿಂದಾಗಿ ನಗರದ ಸದಾಶಿವನಗರದ ಅವರ ಮನೆಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು.
ಕೃಷ್ಣ ಅವರ ಮನೆಗೆ ಪಕ್ಷಾತೀತವಾಗಿ ಭೇಟಿ ನೀಡಿದ ಹಲವು ಮುಖಂಡರು, ಕುಟುಂಬದವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸಹಿತ ಹಲವಾರು ಮಂದಿ ಬಂದು ಹೋದರು. ಮನೆಯ ಮುಂಭಾಗ ದಿನವಿಡೀ ಸಾವಿರಾರು ಮಂದಿ ಸೇರಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
‘ಸಿದ್ಧಾರ್ಥಅವರು ಎಷ್ಟೇ ಕಷ್ಟ ಎದುರಾದರೂ ಓಡಿ ಹೋಗುವ ಜಾಯಮಾನದವರಲ್ಲ. ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಅವರಿಗೆ ತೆರಿಗೆ ಅಧಿಕಾರಿಗಳು ಕಿರುಕುಳ ನೀಡಿರುವ ಸಾಧ್ಯತೆ ಇದೆ’ ಎಂದು ಸಿದ್ದರಾಮಯ್ಯ ಹೇಳಿದರೆ, ಅವರು ನಾಪತ್ತೆಯಾಗಿರುವ ಕುರಿತುಸಮಗ್ರ ತನಿಖೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಕೃಷ್ಣ ಅವರ ಮನೆ ಸಮೀಪದಲ್ಲೇ ಇರುವ ಸಿದ್ಧಾರ್ಥಮನೆಯಲ್ಲಿ ಭದ್ರತಾ ಸಿಬ್ಬಂದಿ, ನಾಲ್ವರು ಮಹಿಳಾ ಸಿಬ್ಬಂದಿ ಹೊರತು ಬೇರೆ ಯಾರೂ ಇರಲಿಲ್ಲ.
‘ಎಲ್ಲೋ ಇದ್ದಾರೆ ಅನಿಸುತ್ತಿದೆ’
‘ಸಾಹೇಬ್ರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಎಲ್ಲೋ ಬದುಕಿ ಇದ್ದಾರೆ ಎಂದೇ ನನ್ನ ಮನಸ್ಸು ಹೇಳುತ್ತಿದೆ. ಅವರು ತಲೆಬಿಸಿ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. 20 ವರ್ಷದಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ದಿನಚರಿಯನ್ನು ಕಂಡ ನೆಲೆಯಲ್ಲಿ ಇಂತಹ ವಿಶ್ವಾಸ ನನಗಿದೆ’ ಎಂದು ಸಿದ್ಧಾರ್ಥ ಅವರ ಮನೆಯ ಭದ್ರತಾ ಸಿಬ್ಬಂದಿ ನಾಗರಾಜ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.