ADVERTISEMENT

ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ವಿಜಯ್‌ ಭಾಸ್ಕರ್‌ ನೇಮಕ 

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 16:09 IST
Last Updated 30 ಜೂನ್ 2018, 16:09 IST
ವಿಜಯ್‌ ಭಾಸ್ಕರ್‌ (ಎಡತುದಿ), ನಿರ್ಗಮಿತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ
ವಿಜಯ್‌ ಭಾಸ್ಕರ್‌ (ಎಡತುದಿ), ನಿರ್ಗಮಿತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ   

ಬೆಂಗಳೂರು: ರಾಜ್ಯ ಸರ್ಕಾರದ 37ನೇ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ಶನಿವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರಾವಧಿ 2020ರ ಅಂತ್ಯದವರೆಗೆ ಇರಲಿದೆ.

‘ಜನರ ಮನೆ ಬಾಗಿಲಿಗೇ ಸರ್ಕಾರಿ ಸೇವೆಗಳು ತಲುಪಬೇಕು. ತಮ್ಮ ಕೆಲಸಕ್ಕಾಗಿ ಅವರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ‘ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಹಾಗೂ ಇಡೀ ವ್ಯವಸ್ಥೆ ತಂಡವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತೇನೆ’ ಎಂದರು.

57ರ ಹರೆಯದ ಕನ್ನಡಿಗ ಅಧಿಕಾರಿ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. 1983ರ ಬ್ಯಾಚ್‌ನ ಅಧಿಕಾರಿಯಾದ ಅವರು ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು. ವಿಜಯಪುರ, ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಜಲಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ADVERTISEMENT

ಅಧಿಕಾರ ಹಸ್ತಾಂತರಿಸಿದ ಕೆ.ರತ್ನಪ್ರಭಾ, ‘ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹಾರಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ದೂರದ ಊರುಗಳಿಂದ ಬಂದ ಜನರು 3–4 ಗಂಟೆ ಕಾಯುತ್ತಿದ್ದರು. ಅವರೆಲ್ಲರ ಬಹುತೇಕ ಸಮಸ್ಯೆ ಬಗೆಹರಿಸಿದ್ದೇನೆ. ಅಂತವರ ಸೇವೆ ಮಾಡಿದ್ದು ಅತ್ಯಂತ ಖುಷಿಯ ಕ್ಷಣ’ ಎಂದರು.

‘ನನ್ನ ಉತ್ತರಾಧಿಕಾರಿ ಪ್ರತಿದಿನ ಒಬ್ಬ ವ್ಯಕ್ತಿಗೆ ಸಹಾಯ ಮಾಡಬೇಕು’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.