ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಸೇವಾ ಅವಧಿ ಇದೇ ತಿಂಗಳ ಅಂತ್ಯಕ್ಕೆ(ಡಿ.31) ಮುಗಿಯಲಿದ್ದು, ಸೇವಾವಧಿ ವಿಸ್ತರಣೆಗೆ ಕೋರಿ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಕಾರ್ಯದರ್ಶಿ ಹುದ್ದೆಗೆ ಏರಲು ಹಿರಿಯ ಐಎಎಸ್ ಅಧಿಕಾರಿಗಳು ಪೈಕಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೇವಾಜ್ಯೇಷ್ಠತೆಯಲ್ಲಿ ಮೊದಲಿಗರು. ಇವರು ಇನ್ನೂ ಒಂದೂವರೆ ವರ್ಷಗಳ ಸೇವಾ ಅವಧಿ ಹೊಂದಿದ್ದಾರೆ.
ಮುಖ್ಯಮಂತ್ರಿಯವರ ಕಚೇರಿ ಮೂಲಗಳ ಪ್ರಕಾರ, ವಿಜಯಭಾಸ್ಕರ್ ಅವರ ಸೇವೆ ಮುಂದುವರಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ರವಿಕುಮಾರ್ ಅವರು ಮುಂಚೂಣಿಯಲ್ಲಿದ್ದಾರೆ. ಈ ಬಗ್ಗೆ ಇನ್ನಷ್ಟೇ ಸಭೆ ನಡೆಸಬೇಕಿದೆ.
ಹಿರಿತನದ ಪಟ್ಟಿಯಲ್ಲಿರುವ ಇತರ ಹಿರಿಯ ಐಎಎಸ್ ಅಧಿಕಾರಿಗಳೆಂದರೆ, ವಂದಿತಾ ಶರ್ಮಾ, ಪ್ರದೀಪ್ ಸಿಂಗ್ ಖರೋಲ, ಐ.ಎಸ್.ಎನ್ ಪ್ರಸಾದ್, ಮಹೇಂದ್ರ ಜೈನ್, ರಜನೀಶ್ ಗೋಯೆಲ್. ಹಿರಿತನವನ್ನೇ ಪರಿಗಣಿಸಿದರೆ ಪಿ.ರವಿಕುಮಾರ್ ಅವರಿಗೆ ಅವಕಾಶಗಳು ಹೆಚ್ಚು. ಅಲ್ಲದೆ, ಈಗ ಮುಖ್ಯಮಂತ್ರಿಯವರ ಆಪ್ತ ಅಧಿಕಾರಿಗಳ ತಂಡದ ಪ್ರಮುಖರೂ ಆಗಿರುವುದರಿಂದ. ಇವರಿಗೆ ಅವಕಾಶಗಳು ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಕೆಲವು ಸಂದರ್ಭಗಳಲ್ಲಿ ಹಿರಿತನವನ್ನು ಬದಿಗೆ ಸರಿಸಿ, ತಮಗೆ ಬೇಕಾದ ಅಧಿಕಾರಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಇಂತಹ ನಿದರ್ಶನಗಳು ವಿರಳ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.