ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಡಿ.12ರಂದು ನಡೆದ ಚುನಾವಣೆಯಲ್ಲಿ ಒಟ್ಟು 35 ನಿರ್ದೇಶಕರು ಆಯ್ಕೆಯಾಗಿದ್ದರು. ಪದಾಧಿಕಾರಿಗಳ ಹುದ್ದೆ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ 34 ನಿರ್ದೇಶಕರು ಭಾಗವಹಿಸಿದ್ದರು.
ತೀವ್ರ ಪೈಪೋಟಿ ನಡೆದಿದ್ದ ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಅವರ ವಿರುದ್ಧ ಬಿ. ಕೆಂಚಪ್ಪಗೌಡ ಅವರು ಸ್ಪರ್ಧಿಸಿದ್ದರು. ಬಾಲಕೃಷ್ಣ ಅವರು 20 ಮತಗಳು ಹಾಗೂ ಕೆಂಚಪ್ಪಗೌಡ ಅವರು 14 ಮತಗಳನ್ನು ಪಡೆದರು.
ಉಪಾಧ್ಯಕ್ಷರ ಎರಡು ಹುದ್ದೆಗಳಿಗೆ ಡಾ.ಕೆ.ವಿ. ರೇಣುಕಾ ಪ್ರಸಾದ್ ಮತ್ತು ಡಿ. ಹನುಮಂತಯ್ಯ ಆಯ್ಕೆಯಾಗಿದ್ದಾರೆ. ಇಬ್ಬರು ತಲಾ 20 ಮತಗಳನ್ನು ಪಡೆದರು. ಈ ಹುದ್ದೆಗಳಿಗೆ ಸ್ಪರ್ಧಿಸಿದ್ದ ಸಿ.ಜಿ. ಗಂಗಾಧರ್ 14 ಮತ್ತು ಎಲ್. ಶ್ರೀನಿವಾಸ್ 13 ಮತಗಳನ್ನು ಪಡೆದರು.
ಟಿ. ಕೋನಪ್ಪ ರೆಡ್ಡಿ ಪ್ರಧಾನ ಕಾರ್ಯದರ್ಶಿಯಾಗಿ, ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಆರ್. ಪ್ರಕಾಶ್ ತಲಾ 20 ಮತಗಳನ್ನು ಪಡೆದು ಆಯ್ಕೆಯಾದರು. ಇವರ ವಿರುದ್ಧ ಕ್ರಮವಾಗಿ ಸ್ಪರ್ಧಿಸಿದ್ದ ಎಚ್.ಎನ್. ಅಶೋಕ್, ಎಂ.ಬಿ. ಮಂಜೇಗೌಡ, ಅಶೋಕ್ ಎಸ್.ಡಿ. ಜಯರಾಮ್ ತಲಾ14 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು. ತುಮಕೂರಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಲೋಕೇಶ್ ಅವರು, ಅನಾರೋಗ್ಯ ಕಾರಣ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. 30 ತಿಂಗಳ ಅವಧಿಗೆ ಈ ನೂತನ ಪದಾಧಿ
ಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.