ADVERTISEMENT

ಯಡಿಯೂರಪ್ಪನವರೇ ಹೈಕಮಾಂಡ್ ವಿರುದ್ಧ ಸಿಡಿದೇಳಿ: ವಿ.ಎಸ್.ಉಗ್ರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 11:00 IST
Last Updated 20 ಜನವರಿ 2020, 11:00 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಚಿತ್ರದುರ್ಗ: ‘ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಿಜೆಪಿಯ ಹೈಕಮಾಂಡ್ ಸಂಸ್ಕೃತಿ ವಿರುದ್ಧ ಸಿಡಿದೇಳುವ ಮೂಲಕ ರಾಜ್ಯದ ಜನತೆಯ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡಿ’ ಎಂದುಕಾಂಗ್ರೆಸ್‌ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಸಲಹೆ ನೀಡಿದರು.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕು ಎಂಬ ಸಂಚು ಒಳಗೊಳಗೆ ನಡೆಯುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಜನಪರ ಆಡಳಿತ ನೀಡಿ.ಇಲ್ಲದಿದ್ದರೆ, ನಿಷ್ಪ್ರಯೋಜಕ ಮುಖ್ಯಮಂತ್ರಿ ಎಂಬ ಕಪ್ಪುಪಟ್ಟಿಗೆ ಸೇರಲಿದ್ದೀರಿ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಮಾತಿಗೂ ಬೆಲೆ ನೀಡದ ಪ್ರಧಾನಿ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ ದಪ್ಪ ಚರ್ಮದವರು. ನೋಟು ಅಮಾನ್ಯೀಕರಣದಿಂದ ಈವರೆಗೂ ಇವರು ಕೈಗೊಂಡ ಕೆಲಸಗಳೆಲ್ಲವೂ ಭಸ್ಮವಾಗುತ್ತಿದ್ದು, ಇಬ್ಬರು ದೇಶಕ್ಕೆ ಆಧುನಿಕ ಭಸ್ಮಾಸುರರಾಗಿದ್ದಾರೆ’ ಎಂದು ಪುನರುಚ್ಚರಿಸಿದರು.

ADVERTISEMENT

‘ಮೋದಿ ಆಡಳಿತದಿಂದ ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಆಗಿದ್ದು, ದಿವಾಳಿಯತ್ತ ಸಾಗುತ್ತಿದೆ. ಇದನ್ನು ಚೇತರಿಕೆಯತ್ತ ಕೊಂಡೊಯ್ಯುವ ಬದಲು ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಬಿಜೆಪಿಯಿಂದ ಮನೆಮನೆ ಅಭಿಯಾನ ಕೈಗೊಂಡಿದ್ದಾರೆ. ಇದು ಹೀಗೆ ಮುಂದುವರೆದರೆ ಬಿಜೆಪಿ ಮುಕ್ತ ಭಾರತ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ದೇಶದಲ್ಲಿ ಕೈಗಾರಿಕಾಭಿವೃದ್ಧಿ, ಉದ್ಯೋಗ ಸೃಷ್ಟಿ, ಹಸಿವು ಮುಕ್ತ ಭಾರತ ನಿರ್ಮಾಣ, ಆರ್ಥಿಕ ಪ್ರಗತಿಯತ್ತ ಚಿಂತಿಸುವ ಬದಲು ಮೋದಿ, ಅಮಿತ್ ಶಾ ಒಡೆದಾಳುವ ನೀತಿಗೆ ಮುಂದಾಗಿದ್ದಾರೆ’ ಎಂದು ದೂರಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ‘ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿದ್ದಾರೆ. ದೇಶದ ಬೊಕ್ಕಸಕ್ಕೆ ಲಾಭ ತಂದುಕೊಡುವಂಥ ಸಂಸ್ಥೆಗಳೆಲ್ಲವನ್ನೂ ಅದಾನಿ, ಅಂಬಾನಿ ಕಂಪನಿಗೆ ಮಾರಾಟ ಮಾಡಿದರೂ ಅಚ್ಚರಿ ಇಲ್ಲ. ಈ ಕುರಿತು ರಾಜ್ಯದ ಜನ ಜಾಗೃತರಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.