ಬೆಂಗಳೂರು: ಬೀದಿನಾಯಿಗಳ ಹಾವಳಿಯ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಚಿಕ್ಕಮಗಳೂರು ಜಿಲ್ಲೆಗೆ ನೀಡಿರುವ ಅನುದಾನದ ಬಗ್ಗೆ ಜೆಡಿಎಸ್ನ ಎಸ್.ಎಲ್.ಭೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ಹತ್ತಾರು ಪುಟಗಳ ಉತ್ತರ ನೀಡಿದ್ದರು.
ಉತ್ತರ ಪತ್ರವನ್ನು ತಿರುವುಹಾಕಿದ ಭೋಜೇಗೌಡರು, ‘ಅ ಇಂದ ಉಊವರೆಗೂ ಉತ್ತರ ನೀಡಿದ್ದಾರೆ’ ಎಂದರು. ನಂತರ ಮಾತನ್ನು ಬೀದಿನಾಯಿಗಳತ್ತ ತಿರುಗಿಸಿದರು. ‘ಮಹಾಸ್ವಾಮಿ, ನಗರ–ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಬೀದಿನಾಯಿಗಳಿಗೆ ಏನಾದರೂ ಮಾಡಬೇಕು’ ಎಂದರು.
ರಹೀಂ ಖಾನ್, ‘ಸುಪ್ರೀಂ ಕೋರ್ಟ್ ಆದೇಶವಿದೆ. ಅವುಗಳಿಗೆ ಲಸಿಕೆ ಹಾಕಿಬಿಡಬಹುದು ಅಷ್ಟೇ’ ಎಂದು ಉತ್ತರಿಸಿದರು. ಭೋಜೇಗೌಡ, ‘ಲಸಿಕೆ ಹಾಕಿದರೆ ರೇಬಿಸ್ ತಡೆಗಟ್ಟಬಹುದು ಅಷ್ಟೆ. ನಾಯಿಗಳು ಕಚ್ಚುವುದನ್ನು ತಡೆಯಲು ಆಗುವುದಿಲ್ಲ. ನಾನು ಮಾತನಾಡುತ್ತಿರುವುದು, ಕಚ್ಚುವ ನಾಯಿಗಳ ಬಗ್ಗೆ’ ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ನಾಯಿಗಳನ್ನು ಹೊರಹಾಕಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ’ ಎಂದರು. ಅದಕ್ಕೆ ಆಡಳಿತ ಪಕ್ಷದ ಕಡೆಯಿಂದ ಸಚಿವ ಬೈರತಿ ಸುರೇಶ್, ‘ಅದು ದೆಹಲಿಗೆ ಮಾತ್ರ ಅನ್ವಯ’ ಎಂದರು. ರವಿಕುಮಾರ್, ‘ನೀವು ಬೆಂಗಳೂರಿಗೂ ಅನ್ವಯಿಸಿ ಜಾರಿಗೆ ತನ್ನಿ’ ಎಂದು ಒತ್ತಾಯಿಸಿದರು. ಮತ್ತು ಕುರ್ಚಿಯಲ್ಲಿ ಕೂತು, ‘ಇವರು ನಾಯಿಗಳನ್ನು ಹೊರಹಾಕುವುದಿಲ್ಲ. ಬೌಬೌಗಳಿಗೆ ಬಿರಿಯಾನಿ ಹಾಕುತ್ತಾರೆ ಅಷ್ಟೆ’ ಎಂದು ಗೊಣಗಿದರು.
ಈ ಮಧ್ಯೆ ಮತ್ತೆ ಎದ್ದು ನಿಂತ ಭೋಜೇಗೌಡ, ‘ನಾಯಿಗಳ ಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಹಿಂದಿನ ಆದೇಶವನ್ನು ಬದಲಿಸಿ ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ. ನಾಯಿಗಳಿಂದ ಶಾಲಾ ಮಕ್ಕಳಿಗೆ, ಜನ ಸಾಮಾನ್ಯರಿಗೆ ಮುಕ್ತಿ ನೀಡಿ. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ, 2,400 ನಾಯಿಗಳಿಗೆ ಮಾಂಸಾಹಾರದಲ್ಲಿ ಔಷಧ ಹಾಕಿ ಸಾಯಿಸಿದ್ದೆವು. ಆಮೇಲೆ ತೆಂಗಿನ ಮರದ ಬುಡದಲ್ಲಿ ಹುಗಿದಿದ್ದೆವು’ ಎಂದರು.
ರಹೀಂ ಖಾನ್, ‘ಪ್ರಾಣಿ ದಯಾಸಂಘದವರು ಬರುತ್ತಾರೆ ಇರಿ’ ಎಂದು ತಕರಾರು ಮುಂದಿಟ್ಟರು. ಇದರಿಂದ ಕೆರಳಿದ ಭೋಜೇಗೌಡ, ‘ಎಲ್ಲ ನಾಯಿಗಳನ್ನು ಹಿಡಿದು, ಪ್ರಾಣಿ ದಯಾ ಸಂಘದವರ ಮನೆಗಳಿಗೆ ಬಿಡಿ’ ಎಂದು ಕೂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.