ADVERTISEMENT

ರಾಗಿ ಖರೀದಿ: ರೈತರಿಗೆ ಅನುಕೂಲ ಆಗುವಂತೆ ತೀರ್ಮಾನ– ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 7:52 IST
Last Updated 27 ಜನವರಿ 2022, 7:52 IST
   

ಬೆಂಗಳೂರು: ‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮುಂದುವರಿಸಬೇಕೆಂಬ ಬೇಡಿಕೆ ಬಂದಿದೆ. ಬೆಂಬಲ ಬೆಲೆ ಕುರಿತು ಚರ್ಚಿಸಲು ಸಚಿವ ಸಂಪುಟ ಉಪ ಸಮಿತಿಯಿದೆ. ಆ ಸಮಿತಿಯ ಅನುಮೋದನೆ ಪಡೆದು ರೈತರಿಗೆ ಅನುಕೂಲ ಆಗುವ ರೀತಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಮ್ಮದು ಸ್ಪಂದಾನಶೀಲ ಸರ್ಕಾರ. ಯಾವಾಗೆಲ್ಲ ಸಮಸ್ಯೆಗಳು ಉಂಟಾಗುತ್ತದೊ ಅದಕ್ಕೆಲ್ಲ ಸ್ಪಂದಿಸುತ್ತಲೇ ಬಂದಿದ್ದೇವೆ. ಜೋಳ ಖರೀದಿ ಮೂಲಕ ಎಲ್ಲ ರೈತರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದರು.

‘ನಾಳೆ(ಶುಕ್ರವಾರ) ನಿಮ್ಮ ಜನ್ಮ ದಿನ ಮತ್ತು ನಿಮ್ಮ ನೇತೃತ್ವದ ಸರ್ಕಾರಕ್ಕೆ ಆರು ತಿಂಗಳು ತುಂಬುತ್ತಿದೆ. ಏನಾದರು ಹೊಸ ಘೋಷಣೆಗಳನ್ನು ಮಾಡುತ್ತೀರಾ?‘ ಎಂದು ಕೇಳಿದ ಪ್ರಶ್ನೆಗೆ, ‘ನಾನು ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡುವುದಿಲ್ಲ. ಯಾವತ್ತೂ ಮಾಡಿಲ್ಲ ಕೂಡಾ. ಸರ್ಕಾರಕ್ಕೆ ಆರು ತಿಂಗಳು ಆಗಿರುವ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡುತ್ತೇವೆ. ಈ ಆರು ಅವಧಿಯಲ್ಲಿ ಏನೆಲ್ಲ ಕೆಲಸಗಳು ಆಗಿವೆ, ಅವು ಯಾವ ರೀತಿ ಜನೋಪಯೋಗಿ ಆಗಿದೆ ಎಂಬ ನೋಟದ ವಿವರಗಳನ್ನು ನೀಡುತ್ತೇನೆ’ ಎಂದರು.

ADVERTISEMENT

‘ಅಚ್ಚರಿಯ ಘೋಷಣೆಗಳೇನಾದರೂ ಇದೆಯೇ?’ ಎಂದು ಕೇಳಿದಾಗ, ‘ಅಚ್ಚರಿಯ ಘೋಷಣೆಗಳು ಏನೂ ಇಲ್ಲ. 6 ತಿಂಗಳಿಗೆಲ್ಲ ಘೋಷಣೆ ಮಾಡಲು ಆಗುತ್ತಾ. ಜನರಿಗೆ ನಿರಂತರವಾಗಿ ಸಹಾಯ ಮಾಡುವಂಥ, ಜನ ಕಲ್ಯಾಣ ಯೋಜನೆಗಳನ್ನು ರೂಪಿಸುತ್ತೇವೆ’ ಎಂದರು.

‘ಇಂದು ನಡೆಯುವ ಸಚಿವ ಸಂಪುಟಸ ಸಭೆ ಕಾರ್ಯಸೂಚಿ ಪ್ರಕಾರವೇ ಹೋಗುತ್ತದೆ. ಇತರ ವಿಷಯಗಳು ಬಂದಾಗ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೇವೆ. ಕೋವಿಡ್‌ ನಿರ್ವಹಣೆಯ ಬಗ್ಗೆ ತಜ್ಞರ ಸಮಿತಿಗೆ ವರದಿ ಕೊಡಲು ಹೇಳಿದ್ದೇನೆ. ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.