ದಾವಣಗೆರೆ: ನಾನು ದಾರಿದ್ರ್ಯ ಸರ್ಕಾರ ಎಂದು ಕರೆದಿದ್ದೆ. ಇದಕ್ಕೆ ಬಜೆಟ್ ಮೂಲಕ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಬಜೆಟ್ನಲ್ಲಿ ಎಲ್ಲಿದೆ ಉತ್ತರ ಮಿಸ್ಟರ್ ಯಡಿಯೂರಪ್ಪ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಹೇಳಿಕೆ ನೀಡಿದ ಅವರು, ಕಲ್ಯಾಣ ಕರ್ನಾಟಕ್ಕೆ ₹ 2500 ಕೋಟಿ ಕೇಳಿದ್ದರು. ಸರ್ಕಾರ ನೀಡಿದ್ದು ₹ 1500 ಕೋಟಿ ಮಾತ್ರ. ನಾನು ಸಿಎಂ ಆಗಿದ್ದಾಗ ಇಷ್ಟು ಕೊಟ್ಟಿದ್ದೆ. ಬಜೆಟ್ನಲ್ಲಿ ಹೇಳಿದ್ದು ಒಂದು, ಮಾಡುವುದು ಮತ್ತೊಂದು ಯಡಿಯೂರಪ್ಪ ನಡೆ. ಬಜೆಟ್ ಮಂಡನೆ ಮರುದಿನ ನೀರಾವರಿಗೆ ಹತ್ತು ಸಾವಿರ ಕೋಟಿ ಪ್ರಕಟಿಸಿದ್ದಾರೆ. ಅದು ಹೇಗೆ ಸಾದ್ಯ. ಇದರಿಂದ ಬಜೆಟ್ ತನ್ನ ಪಾವಿತ್ರ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಸಿದರು.
ಶಾದಿಭಾಗ್ಯ ರದ್ದು ಆಕ್ರೋಶ
ಬಿಜೆಪಿಯವರಿಗೆ ಸಂವಿಧಾನದಲ್ಲಿನಂಬಿಕೆ ಇಲ್ಲಾ. ಅಲ್ಪ ಸಂಖ್ಯಾತರ ವಿರೋಧಿಗಳು. ದಲಿತರ ವಿರೋಧಿಗಳು. ಇದೇ ಕಾರಣಕ್ಕೆ ಶಾದಿ ಭಾಗ್ಯ ರದ್ದುಮಾಡಲಾಗಿದೆ. ರಾಜ್ಯದಲ್ಲಿ ದಲಿತರಿಗೆ ನೀಡಿದ ಹಣದಲ್ಲಿ ಕಡಿತವಾಗಿದೆ ಎಂದು ಆರೋಪಿಸಿದರು.
ರಾಷ್ಟವಿರೋಧಿ ಅಲ್ಲ
ಬೀದರ್ ಶಾಹೀನ್ ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನ ರಾಷ್ಟ್ರವಿರೋಧಿಯಲ್ಲ. ಅದು ಐಪಿಸಿ 124 ಎ ಅಡಿಯಲ್ಲಿ ಇರಲ್ಲ. ಇದನ್ನು ನ್ಯಾಯಾಲಯವೇ ಹೇಳಿದೆ. ಆದರೂ ಅವರನ್ನು ಜೈಲಿಗೆ ಹಾಕಿದ್ದಾರೆ ಅದು ತಪ್ಪು ಎಂದು ಹೇಳಿದರು.
ಪ್ರತ್ಯೇಕ ರಾಜ್ಯ ತಪ್ಪು
ಶಾಸಕ ಉಮೇಶ ಕತ್ತಿ ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಕೊಳ್ಳಲಿ. ಆದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಸೂಕ್ತವಲ್ಲ. ಉತ್ತರ ಕರ್ನಾಟಕ ದ ಸಲುವಾಗಿ ವಿಧಾನಸಭೆ ಹೊರಗೆ ಒಳಗೆ ಹೋರಾಟ ಮಾಡಲಿ. ಅದು ಬಿಟ್ಟು ಪ್ರತ್ಯೇಕ ರಾಜ್ಯ ಬೇಡಿಕೆ ತಪ್ಪು ಎಂದು ತಿಳಿಸಿದರು.
ಬೇಡಜಂಗಮ ಮೀಸಲಾತಿ ಬೇಡ
ಜಂಗಮರನ್ನು ಪೂಜ್ಯರು ಎಂದು ಕರೆಯುತ್ತಾರೆ. ಬೇಡ ಜಂಗಮಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿವುದು ಸರಿಯಲ್ಲ ಎಂದರು.
ಕೆಪಿಸಿಸಿ ಕಥೆ
ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ ವಿಳಂಬ ವಾಗಿದೆ. ಬೇಗ ಮಾಡಿ ಎಂದು ನಾನೂ ಹೇಳಿದ್ದೇನೆ. ನೋಡಬೇಕು. ಪಕ್ಷದ ವರಿಷ್ಠರುಮಾಡುತ್ತಾರೆ. ಈ ಬಗ್ಗೆ ನಾನು ಯಾವುದೇ ರೀತಿ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.