ಬೆಳಗಾವಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಹಾಗೂ ನಾನು ಉಪಮುಖ್ಯಮಂತ್ರಿಯಾಗಲು ಅನರ್ಹ ಶಾಸಕರೇ ಕಾರಣ. ಹೀಗಾಗಿ, ಅವರನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನನ್ನ ರಾಜಕೀಯ ಭವಿಷ್ಯದ ಬಗ್ಗೆ ಹೈಕಮಾಂಡ್ ವಿಚಾರ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಗರಪ್ಪ ದಾಶ್ಯಾಳ ಅಥಣಿಯಲ್ಲಿ ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ತಿಳಿ ಹೇಳಿ ವಾಪಸ್ ಪಡೆಸುತ್ತೇನೆ. ಬುಧವಾರ (ನ. 20) ಸಂಜೆಯೊಳಗೆ ನಾಮಪತ್ರ ಹಿಂಪಡೆಯುತ್ತಾರೆ. ಕಾಗವಾಡದಲ್ಲಿ ಭಿನ್ನಮತವೇನಿಲ್ಲ’ ಎಂದರು.
ನಿಮ್ಮನ್ನು ಸೋಲಿಸಿದ ಅಭ್ಯರ್ಥಿಯನ್ನೇ ಗೆಲ್ಲಿಸುವ ಅನಿವಾರ್ಯ ಬಂತಲ್ಲಾ ಎಂಬ ಪ್ರಶ್ನೆಗೆ, ‘ಇವೆಲ್ಲವೂ ರಾಜಕೀಯ ಬೆಳವಣಿಗೆಗಳು. ಅವರೆಲ್ಲರೂ ಈಗ ನಮ್ಮ ಪಕ್ಷದವರೇ’ ಎಂದರು.
‘17 ಶಾಸಕರು ಮೈತ್ರಿ ಸರ್ಕಾರ ಪತನಕ್ಕಾಗಿ ಕೆಲಸ ಮಾಡಿದ್ದಾರೆ. ಪರಿಣಾಮ, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿ ಸಹಜವಾಗಿಯೇ ಅಸಮಾಧಾನಗೊಂಡು ಅನರ್ಹ ಶಾಸಕರನ್ನು ಸೋಲಿಸುವ ಕೆಲಸಕ್ಕೆ ಮುಂದಾಗಿರಬಹುದು. ಆದರೆ, ಅಥಣಿಯಲ್ಲಿ ಕಾರ್ಯಕರ್ತರು ನನ್ನ ಮಾತು ಮೀರುವುದಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಕೆಲಸ ಹಂಚಿದ್ದೇನೆ’ ಎಂದು ತಿಳಿಸಿದರು.
‘ಮಹೇಶ ಕುಮಠಳ್ಳಿ ಅವರನ್ನು ಮಾತನಾಡಿಸುತ್ತಿಲ್ಲ ಎನ್ನುವುದೆಲ್ಲವೂ ಸುಳ್ಳು’ ಎಂದರು.
‘ಅಶೋಕ ಪೂಜಾರಿ ಮನವೊಲಿಸಲು ಪ್ರಯತ್ನಿಸಿದ್ದೆವು. ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟರೂ ಪಡೆಯಲಿಲ್ಲ. ಈಗ ಗೋಕಾಕದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅವರ ಮನಸ್ಸು ಸ್ಥಿರವಾಗಿಲ್ಲ. ಪಕ್ಷ ಸೂಚಿಸಿದರೆ ಗೋಕಾಕ ಸೇರಿ ಯಾವ ಕ್ಷೇತ್ರಕ್ಕಾದರೂ ಹೋಗಿ ಪ್ರಚಾರ ಮಾಡುತ್ತೇನೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ತಂತ್ರಗಳು ಫಲಿಸುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.