ADVERTISEMENT

ಶಾಸಕ–ಅಧಿಕಾರಿ ಸಂಭಾಷಣೆ ವೈರಲ್‌

ತಮ್ಮ ಆಪ್ತರಿಗೆ ಟೆಂಡರ್‌ ಕೊಡಿಸಲು ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 19:04 IST
Last Updated 18 ಫೆಬ್ರುವರಿ 2019, 19:04 IST

ಧ‌ಾರವಾಡ: ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ಕೇಂದ್ರಕ್ಕೆ (ಎಂಎಸ್‌ಪಿಟಿಸಿ) ಆಹಾರ ಸಾಮಗ್ರಿ ಸರಬರಾಜು ಟೆಂಡರ್‌ ಅನ್ನು ತಮ್ಮ ನಿಷ್ಠರಿಗೆ ನೀಡುವ ಕುರಿತು ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಮತ್ತು ಸಿಡಿಪಿಒ ಪದ್ಮಾವತಿ ಸೌದರಿ ಅವರು ಮಾತನಾಡಿದ್ದಾರೆ ಎನ್ನಲಾದ ಫೋನ್ ಸಂಭಾಷಣೆ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗರ್ಭಿಣಿ, ಬಾಣಂತಿ ಮತ್ತು 6 ವರ್ಷದೊಳಗಿನ ಮಕ್ಕಳಿಗೆ ವಿತರಿಸುವ ಆಹಾರ ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಮಾರುಕಟ್ಟೆಯಿಂದ ಖರೀದಿಸಬೇಕು ಎಂಬ ನಿಯಮವಿದೆ. ಆದರೆ, ಇದನ್ನು ಖರೀದಿಸುವ ವಿಷಯದಲ್ಲಿ ಆಂತರಿಕ ಕಚ್ಚಾಟ ನಡೆದಿದೆ ಎನ್ನಲಾಗಿದೆ. ಈ ಕುರಿತಂತೆ ಶಾಸಕ ನಿಂಬಣ್ಣವರ, ಪದ್ಮಾವತಿ ಮತ್ತು ಎಂಎಸ್‌ಪಿಟಿಸಿ ಅಧ್ಯಕ್ಷೆ ಜಯಶ್ರೀ ದೇಸಾಯಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ತುಣುಕು ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

ಶಾಸಕರ ಆದೇಶದ ಅನ್ವಯ ಅವರ ಆಪ್ತರು ಆಹಾರ ಸರಬರಾಜು ಮಾಡುತ್ತಿದ್ದಾರೆ. ಆದರೆ ಜಯಶ್ರೀ ದೇಸಾಯಿ ಅವರು ಇದನ್ನು ಆಕ್ಷೇಪಿಸಿದ್ದು, ತಮಗೇ ಟೆಂಡರ್‌ ಬಿಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಕೊನೆಗೆ, ಕನಿಷ್ಠ ಪಕ್ಷ ಬೆಲ್ಲ ಖರೀದಿಯ ಟೆಂಡರ್ ಆದರೂ ನೀಡುವಂತೆ ಮನವಿ ಮಾಡಿದ್ದಾರೆ. ಒಂದೊಮ್ಮೆ ಎಲ್ಲವೂ ಶಾಸಕರ ಕಡೆಯವರಿಗೇ ಬೇಕೆಂದರೆ, ಉಳಿಯುವ ₹2 ಲಕ್ಷ ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ADVERTISEMENT

ಜಯಶ್ರೀ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಪದ್ಮಾವತಿ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ, ಶಾಸಕರು ಸೂಚಿಸಿದಂತೆ ನಡೆಯಬೇಕು ಎಂದೂ ಹೇಳಿದ್ದಾರೆ. ಧ್ವನಿಮುದ್ರಿಕೆಯಲ್ಲಿ ಕಿರಣ್ ಎಂಬ ಹೆಸರು ಕೇಳಿಬರುತ್ತದೆ.

ಶಾಸಕ ನಿಂಬಣ್ಣವರ, ‘ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯಲು ಅವಕಾಶ ನೀಡಿಲ್ಲ. ನನಗೆ ಬೆಂಬಲಿಸಿದವರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.