ಮೈಸೂರು: ಲೇಖಕ, ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ (75) ಅನಾರೋಗ್ಯದಿಂದ ಶುಕ್ರವಾರ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ, ಪುತ್ರಿ ಹಾಗೂ ಲೇಖಕಿಯಾಗಿರುವ ಜ.ನಾ.ತೇಜಶ್ರೀ ಮತ್ತು ಸೋದರ ಇದ್ದಾರೆ. ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಅವರು ಹಾಸನದಲ್ಲಿ ವಕೀಲರಾಗಿದ್ದರು. ಇದಕ್ಕೂ ಮೊದಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ನಂತರ ಕಾನೂನು ಪದವಿ ಪಡೆದು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ಹಾಸನದ ರಾಜೀವ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಹಾಗೂ ಕನ್ನಡ ವಿಷಯ ಬೋಧಿಸುತ್ತಿದ್ದರು. ಮೂರು ವರ್ಷಗಳಿಂದ ಕೃಷಿ ಮಾಡುತ್ತಿದ್ದರು.
ಜಗದ ತೊಟ್ಟಿಲು (ಕವನ ಸಂಕಲನ), ಅದಮ್ಯ (ಕಾದಂಬರಿ), ರಣಬಲಿ (ನಾಟಕ), ವೇದಪುರಾಣ ಆಚೆಗೆ (ವೈಚಾರಿಕ ಲೇಖನಗಳ ಸಂಕಲನ), ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು (ಲೇಖನಗಳ ಸಂಕಲನ), ಸಿದ್ಧಾರ್ಥ (ಅನುವಾದಿತ ಕಾದಂಬರಿ) ಕೃತಿಗಳನ್ನು ರಚಿಸಿದ್ದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು.
ಅಂತ್ಯಕ್ರಿಯೆ ಜನಿವಾರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.