ಬೆಂಗಳೂರು: ‘ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡಲಾಗುವ ಈ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಚಾಮರಾಜನಗರ ಜಿಲ್ಲೆಯ ಕಬ್ಬಳ್ಳಿ ಗ್ರಾಮದ ಮೂಡಲಪಾಯ ಯಕ್ಷಗಾನ ಕಲಾವಿದ ಬಂಗಾರಾಚಾರಿ ಅವರು ಭಾಜನರಾಗಿದ್ದಾರೆ’ ಎಂದುಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಶಸ್ತಿಯು₹1ಲಕ್ಷ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ಆಗಸ್ಟ್ನಲ್ಲಿ ಶಿರಸಿಯಲ್ಲಿ ನಡೆಯಲಿದೆ’ ಎಂದು ತಿಳಿಸಿದರು.
‘ಗೌರವ ಪ್ರಶಸ್ತಿ’ಗೆ ರಾಮರಾಜೇ ಅರಸ್ (ಘಟ್ಟದಕೋರೆ), ಸುಬ್ರಹ್ಮಣ್ಯ ಭಟ್ ಮಾಂಬಾಡಿ (ತೆಂಕುತಿಟ್ಟು), ಗುಂಡ್ಮಿ ಸದಾನಂದ ಐತಾಳ್ (ಬಡಗುತಿಟ್ಟು), ಎಸ್.ಸಿ.ಜಗದೀಶ್ (ಮೂಡಲಪಾಯ), ಕೆ.ಮೋಹನ್ (ಯಕ್ಷಗಾನ ಸಂಘಟಕರು) ಆಯ್ಕೆಯಾಗಿದ್ದಾರೆ.
ಇವರಿಗೆ ₹50 ಸಾವಿರ ನಗದು, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಕುಂಬ್ಳೆ ಶ್ರೀಧರ ರಾವ್(ಸ್ತ್ರೀ ವೇಷಧಾರಿ), ಮೋಹನ್ ಬೈಪಡಿತ್ತಾಯ (ಚಂಡೆ–ಮದ್ದಳೆ ವಾದಕ), ಮಣೂರು ನರಸಿಂಹ ಮಧ್ಯಸ್ಥ (ಯಕ್ಷಗಾನ ಗುರುಗಳು), ನಿತ್ಯಾನಂದ ಹೆಬ್ಬಾರ್ (ಮದ್ದಳೆ), ಕೃಷ್ಣ ಮಾಣಿ ಅಗೇರ (ಯಕ್ಷಗಾನ ಭಾಗವತರು), ಭಾಸ್ಕರ ಜೋಶಿ ಶಿರಳಗಿ (ಸ್ತ್ರೀ ಪಾತ್ರ), ಎಸ್.ಪಿ.ಮುನಿಕೆಂಪಯ್ಯ (ಮೂಡಲಪಾಯ), ನಾರಾಯಣಸ್ವಾಮಿ (ಮುಖವೀಣೆ), ಪಿ. ಶಾಂತಾರಾಮ ಪ್ರಭು (ತಾಳಮದ್ದಳೆ), ಮಂದಗಲ್ಲು ಆನಂದ ಭಟ್ (ಯಕ್ಷಗಾನ ವೇಷಧಾರಿ) ಅವರು ಪಾತ್ರರಾಗಿದ್ದು, ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು.
‘ಪುಸ್ತಕ ಬಹುಮಾನ’ ಪುರಸ್ಕಾರ ₹25 ಸಾವಿರ ಮೊತ್ತದ್ದಾಗಿದೆ. ಇದಕ್ಕೆ ಎನ್.ನಾರಾಯಣ ಶೆಟ್ಟಿ (ಛಂದಸ್ಪತಿ), ಕಬ್ಬಿನಾಲೆ ವಸಂತ ಭಾರದ್ವಾಜ್ (ಪ್ರಸಂಗಾಭರಣ), ಕೆ.ಎಂ.ರಾಘವ ನಂಬಿಯಾರ್ (ರಂಗವಿದ್ಯೆಯ ಹೊಲಬು) ಆಯ್ಕೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.