ಹರಪನಹಳ್ಳಿ: ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಶನಿವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ವಿರುದ್ಧ ಕೆಲವರು ಧಿಕ್ಕಾರ ಕೂಗಿದ್ದರಿಂದ ಸಿಟ್ಟಿಗೆದ್ದು ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದರು.
ಅಧ್ಯಕ್ಷರ ಬರುವಿಕೆಗೆ ತಾಲ್ಲೂಕು ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳು ಕಾದು ನಿಂತಿದ್ದರು. ಯುವ ಘಟಕದ ಅಧ್ಯಕ್ಷ ಮತ್ತೂರು ಬಸವರಾಜ್ ಮತ್ತು ಚಿಗಟೇರಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ಶಿವಕುಮಾರ್, ‘ಪ್ರವಾಸಿ ಮಂದಿರದಲ್ಲಿ ಸಭೆ ನಿಗದಿ ಪಡಿಸಲಾಗಿದೆ. ಅಲ್ಲಿಗೆ ಬನ್ನಿ’ ಎಂದು ರಕ್ಷಾ ರಾಮಪ್ಪ ಅವರನ್ನು ಆಹ್ವಾನಿಸಿದರು. ಆದರೆ, ರಕ್ಷಾ ರಾಮಯ್ಯ, ‘ಹೊಸಪೇಟೆ ಕಾರ್ಯಕ್ರಮಕ್ಕೆ ತೆರಳಲು ಈಗಾಗಲೇ ತಡವಾಗಿದೆ’ ಎಂದು ಹೇಳಿದರು. ಆಗ ಅವರ ವಿರುದ್ಧ ಕೆಲವರು ಧಿಕ್ಕಾರ ಕೂಗಿದರು. ತಕ್ಷಣವೇ ರಕ್ಷಾ ರಾಮಯ್ಯ ಅವರು ಧಿಕ್ಕಾರ ಕೂಗಿದವರ ಪೈಕಿ ಒಬ್ಬನ ಕೆನ್ನೆಗೆ ಏಟು ನೀಡಿ ಅಲ್ಲಿಂದ ತೆರಳಿದರು.
ಮತ್ತೂರು ಬಸವರಾಜ್, ‘ಧಿಕ್ಕಾರ ಕೂಗಿದವರು ಯಾರೆಂಬುದು ಗೊತ್ತಿಲ್ಲ. ಅವರು ಯುವ ಘಟಕದವರಲ್ಲ. ರಾಜ್ಯ ಘಟಕದ ಅಧ್ಯಕ್ಷರ ಭೇಟಿ ವೇಳೆ ನಡೆದ ಘಟನೆಯಿಂದ ಬೇಸರವಾಗಿದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.