ADVERTISEMENT

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ತಂತ್ರಜ್ಞಾನ ಬಳಸಿ: ಯುವ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:23 IST
Last Updated 24 ಮಾರ್ಚ್ 2021, 20:23 IST

ಬೆಂಗಳೂರು: ‘ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ, ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಆಗ್ರಹಿಸಿದ್ದಾರೆ.

ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್‌ಗೆ ಮನವಿ ಸಲ್ಲಿಸಿದ ಅವರು, ‘ಮೈಸೂರಿನ ಬೋಗಾದಿ – ಹಿನಕಲ್ ವರ್ತುಲ ರಸ್ತೆಯಲ್ಲಿ ಸಂಚಾರ ಪೊಲೀಸರ ಕಿರುಕುಳದಿಂದ ದೇವರಾಜ್ ಎಂಬವರು ಮೃತಪಟ್ಟು, ಸುರೇಶ್ ಎಂಬವರು ಗಾಯಗೊಂಡ ಘಟನೆ ಆಘಾತಕಾರಿ, ಕ್ರೂರ ಮತ್ತು ಅಮಾನವೀಯ’ ಎಂದಿದ್ದಾರೆ.

‘ಸಂಚಾರ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ತಮ್ಮ ಕರ್ತವ್ಯವನ್ನೇ ಮರೆತಂತೆ ವರ್ತಿಸುತ್ತಿದ್ದಾರೆ. ಸಣ‍್ಣಪುಟ್ಟ ವ್ಯಾಪಾರಿಗಳು, ರೈತರು, ಜನಸಾಮಾನ್ಯರನ್ನೇ ಗುರಿಯಾಗಿಸಿ ದಂಡ ವಸೂಲಿ ಮಾಡುತ್ತಿದ್ದಾರೆ. ಪೊಲೀಸರ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಬೋಗಾದಿಯಲ್ಲಿ ಇದು ಸ್ಫೋಟಗೊಂಡಿ
ರುವುದು ಸಣ್ಣ ಉದಾಹರಣೆ. ಸಂಚಾರ ಪೊಲೀಸರಿಂದ ಎಲ್ಲೆಡೆ ಹಗಲು ದರೋಡೆ, ಶೋಷಣೆ ನಡೆಯುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ತಂತ್ರಜ್ಞಾನದ ಸದ್ಭಳಕೆಯಿಂದ ಸಂಚಾರ ಪೊಲೀಸರ ಹಸ್ತಕ್ಷೇಪ, ಭ್ರಷ್ಟಾಚಾರ ಮತ್ತು ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬಹುದು. ತಕ್ಷಣ ಈ ಬಗ್ಗೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು’ ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಪ್ರವೀಣ್ ಸೂದ್‌, ‘ಕೆಲವು ತಾಂತ್ರಿಕ ತೊಡಕು ಎದುರಾಗಿದೆ. ಅವುಗಳನ್ನು ನಿವಾರಿಸಿ, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.