ADVERTISEMENT

ಜಿ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಈಶ್ವರಪ್ಪ ಭೇಟಿ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 20 ಕೋಟಿ ಬಿಡುಗಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 13:12 IST
Last Updated 24 ಸೆಪ್ಟೆಂಬರ್ 2020, 13:12 IST
ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ಭೇಟಿ ಮಾಡಿದರು
ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ಭೇಟಿ ಮಾಡಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಿದ್ದಿರುವ ಮಳೆಯಿಂದ ರಸ್ತೆಗಳು ಪೂರ್ಣ ಹದಗೆಟ್ಟು ಜನ ಸಾಮಾನ್ಯರು ಓಡಾಡದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಆದ್ದರಿಂದ, ₹20 ಕೋಟಿ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಲ್ಲಿ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರು ಮನವಿ ಮಾಡಿದ್ದಾರೆ.

ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಬುಧವಾರ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೊಸಮನೆ ಕವಿತಾ ಪ್ರಭಾಕರ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ಜಿ.ಪಂ ಸದಸ್ಯರಾದ ಕಿರಣ್ ಕಾರ್ಯಪ್ಪ, ಸಿ.ಕೆ.ಬೋಪಣ್ಣ, ಎಂ.ಕೆ.ವಿಜು ಸುಬ್ರಮಣಿ, ಮೂಕೊಂಡ ಪಿ.ಸುಬ್ರಮಣಿ ಇತರರ ಉಪಸ್ಥಿತಿಯಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಿದರು.

ಕೆಲವು ಕಡೆಯಂತು ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರವಾಸಿಗರು ಸುಮಾರು 20 ಲಕ್ಷಕ್ಕೂ ಹೆಚ್ಚು ಜನ ಆಗಮಿಸುತ್ತಿದ್ದು, ಇಲ್ಲಿನ ರಸ್ತೆಗಳ ದುಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತುರ್ತಾಗಿ ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸದೆ ಇದ್ದರೆ ಇನ್ನಷ್ಟು ಹಾಳಾಗಿ ಸುಗಮ ಸಂಚಾರ ಸಾಧ್ಯವಿಲ್ಲದಂತಾಗುತ್ತದೆ ಎಂದು ಬಿ.ಎ.ಹರೀಶ್ ಅವರು ಸಚಿವರ ಗಮನಕ್ಕೆ ತಂದರು.

ADVERTISEMENT

ಜಿ.ಪಂ ಸದಸ್ಯರ ಮನವಿಯಂತೆ ಅತೀ ಅವಶ್ಯಕತೆ ಇರುವ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿ ಅನುದಾನವನ್ನು ನಿಗದಿಗೊಳಿಸಿ ಬಿಡುಗಡೆ ಮಾಡುವಂತೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರಲ್ಲಿ ಹರೀಶ್ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.