ವಾಸುದೇವನ್ ಪ್ರಕರಣ: ಮಂಕಾದ ಕರ್ನಾಟಕ ಭವನ
ನವದೆಹಲಿ, ಸೆ. 10– ಮುಖ್ಯಮಂತ್ರಿ ಬಂದಾಗಲೆಲ್ಲ ಲವಲವಿಕೆ ಮತ್ತು ಚುರುಕಿನ ಚಟುವಟಿಕೆ ಕಾಣುತ್ತಿದ್ದ ಕರ್ನಾಟಕ ಭವನದಲ್ಲಿ ನಿನ್ನೆಯಿಂದ ಒಂದು ರೀತಿಯ ಮೌನ ಆವರಿಸಿದೆ. ಮುಖ್ಯಮಂತ್ರಿ ದೇವೇಗೌಡ ಅವರ ಮುಖ ಕಳೆಗುಂದಿದೆ, ಪತ್ರಕರ್ತರು ಹೋದಾಗಲೆಲ್ಲ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದವರು ಈಗ ಅವರ ಭೇಟಿಯ ಬಗೆಗೆ ಒಲವು ತೋರುತ್ತಿಲ್ಲ.
ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಅವರಿಗೆ ನ್ಯಾಯಾಲಯ ನಿಂದನೆಗಾಗಿಸುಪ್ರೀಂ ಕೋರ್ಟ್ ನೀಡಿರುವ ಒಂದು ತಿಂಗಳ ಜೈಲು ಶಿಕ್ಷೆಯ ಬಗೆಗೆ ಪ್ರತಿಕ್ರಿಯೆ ಕೇಳಲು ಹೋದ ದೃಶ್ಯಮಾಧ್ಯಮ ಸಿಬ್ಬಂದಿಯನ್ನು ಸಹಾ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಮುಖ್ಯಮಂತ್ರಿಗಳು ಉಳಿದುಕೊಳ್ಳುವ ಭವನದ ಮೂರನೇ ಮಹಡಿಯಲ್ಲಿ ಈಗ ಆತಂಕದ ವಾತಾವರಣ ಮನೆ ಮಾಡಿದೆ.
ಸುಪ್ರೀಂ ಕೋರ್ಟ್ ಒಂದು ವರ್ಷದ ಹಿಂದೆ ನೀಡಿದ್ದ ಆಜ್ಞೆಯನ್ನು ಪಾಲಿಸದ ತಪ್ಪಿನಲ್ಲಿ ಹಿಂದಿನ ಕಾಂಗ್ರೆಸ್ ಹೊಣೆಯೂ ಇದೆ ಎಂದು ಕೆಲವು ಮೂಲಗಳು ಹೇಳುತ್ತವೆ.
ಸಾಲ ಮನ್ನಾ ಯೋಜನೆ: ರಿಸರ್ವ್ ಬ್ಯಾಂಕ್ ವಿರೋಧ
ಮುಂಬೈ, ಸೆ. 10 (ಪಿಟಿಐ, ಯುಎನ್ಐ)– ಬ್ಯಾಂಕ್ ಸಾಲ ಮನ್ನಾಕ್ಕೆ ಅವಕಾಶ ಇರುವ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಪ್ರವೃತ್ತಿ ಕೈಬಿಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಿಸರ್ವ್ ಬ್ಯಾಂಕ್ ಒತ್ತಾಯಿಸಿದೆ.
ವಿಶೇಷವಾಗಿ ಗ್ರಾಮೀಣ ಕ್ಷೇತ್ರಕ್ಕೆ ನೀಡುವ ಸಾಲ ಮನ್ನಾ ಚಾಳಿ ಹೆಚ್ಚುತ್ತಿದೆ. ಆದರೆ, ಗ್ರಾಮೀಣ ಕ್ಷೇತ್ರದ ಸಾಲ ಯೋಜನೆಗಳು ಆಯಾ ಸಾಲ ನೀಡಿಕೆ ಸಂಸ್ಥೆಗಳ ಅವಸಾನಕ್ಕೆ ಕಾರಣವಾಗದೆ, ಬದುಕಿ ಉಳಿಯಲು ಸೂಕ್ತ ವಾತಾವರಣ ಕಲ್ಪಿಸುವಂತೆ ಇರಬೇಕು. ಬಡ್ಡಿ ಸಹಾಯಧನಕ್ಕಿಂತ ಸಕಾಲಕ್ಕೆ ಮತ್ತು ಅಗತ್ಯ ಪ್ರಮಾಣದಷ್ಟು ಸಾಲ ದೊರೆಯುವಂತೆ ಮಾಡುವುದು ಹೆಚ್ಚು ಮಹತ್ವದ್ದು ಎಂದು ಅದು ತನ್ನ ವಾರ್ಷಿಕ ವರದಿಯಲ್ಲಿ ಕಿವಿಮಾತು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.