ADVERTISEMENT

ಇಂತಿಕಾಬ್‌ಗೆ ಅಫ್ರಿದಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:45 IST
Last Updated 1 ಜೂನ್ 2011, 18:45 IST

ಕರಾಚಿ: ತಮ್ಮ ವಿರುದ್ಧ ಕಟುವಾದ ಮಾತುಗಳನ್ನಾಡಿರುವ ಮ್ಯಾನೇಜರ್ ಇಂತಿಕಾಬ್ ಆಲಮ್‌ಗೆ ಪಾಕಿಸ್ತಾನದ ಆಲ್‌ರೌಂಡರ್ ಶಾಹೀದ್ ಅಫ್ರಿದಿ ತಿರುಗೇಟು ನೀಡಿದ್ದಾರೆ.

`ಪೂರ್ವಾಗ್ರಹಕ್ಕೊಳಗಾದ ವ್ಯಕ್ತಿ~ ಎಂದು ಇಂತಿಕಾಬ್ ಅವರನ್ನು ಅಫ್ರಿದಿ ಕರೆದಿದ್ದಾರೆ. ನಾಯಕತ್ವದಿಂದ ತಮ್ಮನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಕಿತ್ತು ಹಾಕುವುದಕ್ಕೆ ಕಾರಣವಾದ ತಂಡದ ಮ್ಯಾನೇಜರ್ ವರದಿಯ ಬಗ್ಗೆಯೂ ಅವರು ಟೀಕೆ ಮಾಡಿದ್ದಾರೆ.

ಪೂರ್ವ ಯೋಜಿತವಾಗಿ ಹಾಗೂ ಪ್ರೋರ್ವಾಗ್ರಹಕ್ಕೊಳಗಾಗಿ ತಮ್ಮ ವಿರುದ್ಧ ವರದಿಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಆಧರಿಸಿ ಪಿಸಿಬಿಯು ತಮ್ಮನ್ನು ನಾಯಕತ್ವದಿಂದ ಕಿತ್ತುಹಾಕಿದ್ದು ಅಚ್ಚರಿಯೆಂದು ಕೂಡ ಶಾಹೀದ್ ಹೇಳಿದ್ದಾರೆ.

`ಇಂತಿಕಾಬ್ ತಮ್ಮ ವರದಿಯಲ್ಲಿ ಯಾವೆಲ್ಲ ವಿಷಯಗಳನ್ನು ಬರೆದಿದ್ದಾರೆ ಎನ್ನುವುದು ಸ್ಪಷ್ಟವಾಗಿ ನನಗಿನ್ನೂ ಗೊತ್ತಿಲ್ಲ. ಆದರೆ ಅವರು ನನ್ನೆದುರು ಕೋಚ್ ವಕಾರ್ ಯೂನಿಸ್ ಬಗ್ಗೆ ಆಡಿದ ಮಾತುಗಳನ್ನು ಕೂಡ ವರದಿಯಲ್ಲಿ ಉಲ್ಲೇಖಿಸಿದ್ದರೆ ಅದು ವಸ್ತುನಿಷ್ಠವಾದ ವರದಿಯಾಗಿರುತ್ತದೆ ಎಂದುಕೊಂಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಅಂಥ ವಿಷಯಗಳನ್ನು ಅವರು ಖಂಡಿತವಾಗಿಯೂ ವರದಿಯಲ್ಲಿ ಪ್ರಸ್ತಾವ ಮಾಡಿರುವುದಿಲ್ಲ~ ಎಂದು ಅಫ್ರಿದಿ ಅವರು ಪಾಕ್ ಚಾನಲ್‌ವೊಂದಕ್ಕೆ ತಿಳಿಸಿದ್ದಾರೆ.

`ಖಂಡಿತವಾಗಿಯೂ ನಾನೊಮ್ಮೆ ಆ ವರದಿಯನ್ನು ನೋಡಲು ಇಷ್ಟಪಡುತ್ತೇನೆ. ಆದರೆ ಅದಕ್ಕೂ ಮುನ್ನ ಪಿಸಿಬಿ ಮುಖ್ಯಸ್ಥರನ್ನು ಭೇಟಿಯಾಗುವುದು ಉದ್ದೇಶ. ಇಲ್ಲಿಯವರೆಗೂ ನನಗೆ ಭೇಟಿಯ ಅವಕಾಶ ನೀಡಲಾಗಿಲ್ಲ~ ಎಂದಿರುವ ಅವರು `ನಾನು ಅನುಚಿತವಾಗಿ ವರ್ತಿಸಿದ್ದೇನೆ, ಆಟಗಾರರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದೇನೆಂದು ಹೇಳಿ ನಾಯಕತ್ವದಿಂದ ಕಿತ್ತುಹಾಕಲಾಯಿತು. ಆದರೆ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ನಿಜವಾಗಿ ಶಿಸ್ತು ಕ್ರಮವನ್ನು ಕೈಗೊಳ್ಳುವುದೇ ಆಗಿದ್ದರೆ ತಂಡಕ್ಕೂ ಆಯ್ಕೆ ಮಾಡಬಾರದಾಗಿತ್ತು. ಇದಕ್ಕೆ ಪಿಸಿಬಿ ಉತ್ತರ ನೀಡುವುದೇ?~ ಎಂದು ಸವಾಲು ಎಸೆದಿದ್ದಾರೆ.

ತಂಡದ ಕೆಲವು ಆಟಗಾರರು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನುವ ಕುರಿತು ತಾವು ಬಹಿರಂಗವಾಗಿ ಮಾತನಾಡಬಹುದು ಎನ್ನುವ ಭಯವಿದ್ದ ಕಾರಣದಿಂದಲೇ ಆತುರದಲ್ಲಿ ತಮ್ಮನ್ನು ನಾಯಕತ್ವದಿಂದ ತೆಗೆದು ಹಾಕಲಾಗಿದೆ ಎನ್ನುವುದು ಅಫ್ರಿದಿ ಅನುಮಾನ.

`ಈಗಲೇ ತಂಡದೊಳಗಿದ ಗುಟ್ಟಿನ ವಿಷಯಗಳ ಕುರಿತು ಮಾತನಾಡುವುದಿಲ್ಲ. ಸರಿಯಾದ ಸಮಯದಲ್ಲಿ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ~ ಎಂದು ಅವರು ಬೆದರಿಕೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT