ADVERTISEMENT

ಕನಸು ಹೊತ್ತು ಬಂದಿದ್ದ ವಿಷ್ಣು ಪಂಡಿತ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌ (ಐಎಎನ್‌ಎಸ್‌): ಅಮೆರಿಕ ನೌಕಾಪಡೆಯ ಹಡಗುಕಟ್ಟೆಯ ಮೇಲೆ ಸೋಮವಾರ ಮಾನಸಿಕ ಅಸ್ವಸ್ಥನೊಬ್ಬನ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಭಾರತ  ಮೂಲದ ವಿಷ್ಣು ಕಿಸಾನ್‌ ಪಂಡಿತ್‌ ಅವರಿಗೆ ಅಮೆರಿಕದ ಬಗ್ಗೆ ಇದ್ದ ಅತಿ ವ್ಯಾಮೋಹ ಮತ್ತು ಕನಸುಗಳನ್ನು ಕಟ್ಟಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯೇ 70ರ ದಶಕದಲ್ಲಿ ಅವರನ್ನು ಇಲ್ಲಿಗೆ ಕರೆತಂದಿತ್ತು.

ಮುಂಬೈನಲ್ಲಿ ಹುಟ್ಟಿ ಬೆಳೆದ ಪಂಡಿತ್‌ 61 ವರ್ಷದ ಪಂಡಿತ್‌ ತಮ್ಮ 20ರ ಹರೆಯದಲ್ಲಿಯೇ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ವಲಸೆ ಬಂದಿದ್ದರು.

70 ದಶಕದ ಮಧ್ಯಭಾಗದಲ್ಲಿ ಕೋಲ್ಕತ್ತ ಸಾಗರ ವಿಜ್ಞಾನ ಕಾಲೇಜಿನಿಂದ ಎಂಜಿನಿಯರಿಂಗ್‌ ಪದವಿ ಪಡೆದ ಪಂಡಿತ್ ಇಲ್ಲಿಯ ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ಸಾಗರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಅಮೆರಿಕದ ನೌಕಾದಳದಲ್ಲಿ ಉದ್ಯೋಗಕ್ಕೂ ಸೇರಿದ ನಂತರ ಅವರು ವಿವಿಧ ಹುದ್ದೆಗಳಲ್ಲಿ 25 ವರ್ಷ ಸೇವೆ ಸಲ್ಲಿಸಿ, ಒಳ್ಳೆಯ ಹೆಸರು ಗಳಿಸಿದ್ದರು.

ಕಳೆದ ತಿಂಗಳು ತಮ್ಮ ಕುಟುಂಬಕ್ಕೆ ಸದಸ್ಯಳಾಗಿ ಮೊಮ್ಮಗಳ ಸೇರ್ಪಡೆಯಿಂದ ಸಂಭ್ರಮಿಸಿದ್ದರು ಎಂದು ಪತ್ನಿ ಅಂಜಲಿ ಪಂಡಿತ್‌ ತಿಳಿಸಿದ್ದಾರೆ.

ಪಂಡಿತ್‌ ಅವರಿಗೆ ಶ್ವಾನಗಳ ಬಗ್ಗೆ ಅತೀವ ವ್ಯಾಮೋಹವಿತ್ತು. ಜೊತೆಗೆ ವಿದ್ಯಾರ್ಥಿ ದಿಸೆಯಿಂದಲೇ ಅಮೆರಿಕದ ಬಗ್ಗೆ ಇನ್ನೂ ವಿಚಿತ್ರವಾದ ಸೆಳೆತವಿತ್ತು.  ಮುಂಬೈ ಕಡಲ ಕಿನಾರೆ ನೋಡುತ್ತ ಬೆಳೆದ ಅವರು ಸಹಜವಾಗಿಯೇ ಸಾಗರ ವಿಜ್ಞಾನದತ್ತ ಒಲವು ಬೆಳೆಸಿಕೊಂಡಿದ್ದರು. ತಮ್ಮನ್ನು  ಸೇರಿದಂತೆ ಅನೇಕ ಮಿತ್ರರನ್ನು ಪಂಡಿತ್‌ ಅಮೆರಿಕಕ್ಕೆ ಕರೆತಂದಿದ್ದರು ಎಂದು ಅವರ ಸಹಪಾಠಿ ಹಾಗೂ ಆಪ್ತಮಿತ್ರ ನನ್ಸ್‌ ಜೈನ್‌ ನನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.