ADVERTISEMENT

ಗಂಗೆಯಲ್ಲಿ ರೋಗಾಣು ವೃದ್ಧಿ

ದೆಹಲಿ ಐಐಟಿ, ಕ್ಯಾಸೆಲ್‌ ವಿ.ವಿ ಅಧ್ಯಯನದಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST
ಹರಿದ್ವಾರದ ಗಂಗಾ ತಟದಲ್ಲಿ ಭಕ್ತರು 	–ಸಂಗ್ರಹ ಚಿತ್ರ
ಹರಿದ್ವಾರದ ಗಂಗಾ ತಟದಲ್ಲಿ ಭಕ್ತರು –ಸಂಗ್ರಹ ಚಿತ್ರ   

ಲಂಡನ್‌ (ಪಿಟಿಐ): ಗಂಗಾ ನದಿಯು ಪ್ರಾಣಕ್ಕೆ ಕುತ್ತು ತರುವಂತಹ ರೋಗಾ­ಣು­­­­­ಗಳ ಆವಾಸ ಸ್ಥಾನ ಎಂದು ಭಾರತ  ಮೂಲದ ತಜ್ಞರನ್ನೊಳಗೊಂಡ ಅಧ್ಯಯನಕಾರರ ತಂಡ­ಹೇಳಿದೆ.

ವಾರ್ಷಿಕ ತೀರ್ಥಯಾತ್ರೆಯ ಸಂದ­ರ್ಭ­­­ದಲ್ಲಿ ಗಂಗಾ ನದಿಯಲ್ಲಿ ಕೀಟಾಣುಗಳ ಪ್ರಮಾಣ 60 ಪಟ್ಟು ಹೆಚ್ಚಿ­ರು­ತ್ತದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಬ್ರಿಟನ್ನಿನ ನ್ಯೂಕ್ಯಾಸಲ್‌ ವಿಶ್ವ­ವಿದ್ಯಾಲಯ ಮತ್ತು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ದೆಹಲಿ) ತಜ್ಞರು ನಡೆಸಿರುವ ಅಧ್ಯಯನದಿಂದ ಈ ಸಂಗತಿ ತಿಳಿದು ಬಂದಿದೆ.

ಅಧ್ಯಯನಕ್ಕಾಗಿ ತಜ್ಞರ ತಂಡವು ಹಿಮಾ­ಲಯದ ತಳ ಭಾಗ ಸೇರಿದಂತೆ ಗಂಗಾ ಮೇಲ್ದಂಡೆಯ ಏಳು ಸ್ಥಳಗಳಿಂದ ನೀರಿನ ಮಾದರಿ ಹಾಗೂ ಕೆಸರು ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು.

ಪವಿತ್ರ ತೀರ್ಥಕ್ಷೇತ್ರಗಳಾದ ಹೃಷಿಕೇಶ ಮತ್ತು ಹರಿದ್ವಾರಕ್ಕೆ ಲಕ್ಷಾಂತರ ಭಕ್ತರು ವಾರ್ಷಿಕ ಯಾತ್ರೆ ಕೈಗೊಳ್ಳುವ ಸಮಯ­ವಾದ ಮೇ ಮತ್ತು ಜೂನ್‌ ತಿಂಗಳಲ್ಲಿ ಗಂಗಾ ನದಿಯಲ್ಲಿ ರೋಗಕಾರಕ ಸೂಕ್ಷ್ಮಾಣುಗಳ ಉತ್ಪತ್ತಿಗೆ ಕಾರಣ­ವಾಗುವ ‘ಪ್ರತಿರೋಧ ವಂಶವಾಹಿ’ಯ (ಜೀನು) ಪ್ರಮಾಣ ಇತರ ಅವಧಿಗಿಂತ 60 ಪಟ್ಟು ಹೆಚ್ಚಿರುತ್ತದೆ ಎಂಬುದನ್ನು ಅಧ್ಯಯನ­ಕಾರರು ಕಂಡು ಕೊಂಡಿದ್ದಾರೆ.

ಪ್ರಮುಖ ಯಾತ್ರಾಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರಾಣಕ್ಕೆ ಎರವಾಗುವ ರೋಗಾಣುಗಳು ಶೀಘ್ರವಾಗಿ ಹರಡುವು­ದನ್ನು ತಡೆಯಬಹುದು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.