ADVERTISEMENT

ಗಡಿ ನಿಯಂತ್ರಣ ರೇಖೆ ನಿವಾಸಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:56 IST
Last Updated 25 ಫೆಬ್ರುವರಿ 2018, 19:56 IST

ಇಸ್ಲಾಮಾಬಾದ್: ‘ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಬಳಿ ಭಾರತ ಇತ್ತೀಚೆಗೆ ಅಪ್ರಚೋದಿತ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಸರ್ಕಾರವು ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದೆ’ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಭಾನುವಾರ ವರದಿ ಮಾಡಿದೆ.

‘ಭಾರತ ಸೇನೆಯ ಕದನವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸ್ಥಳೀಯ ಸರ್ಕಾರಿ ಮೂಲದ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಎಲ್ಓಸಿ ಬಳಿ ಆತಂಕದಲ್ಲಿ ಕಾಲ ಕಳೆಯುತ್ತಿರುವ ಸಾವಿರಾರು ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪಿಓಕೆ ಪ್ರಧಾನಿ ರಾಜಾ ಫಾರೂಕ್ ಹೈದರ್ ಅವರು ನಿರ್ದೇಶಿಸಿದ್ದಾರೆ’ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.

ADVERTISEMENT

‘ಸಣ್ಣ ಪ‍್ರಮಾಣದಲ್ಲಿ ನಾಗರಿಕರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಇದನ್ನು ವಲಯ ಮಟ್ಟಕ್ಕೂ ವಿಸ್ತರಿಸಲಾಗಿದೆ’ ಎಂದು ವರದಿಯಲ್ಲಿ ಇದೆ.

ಉಪ ಹೈಕಮಿಷನರ್‌ಗೆ ಐದನೇ ಬಾರಿ ಸಮನ್ಸ್: ಗಡಿ ನಿಯಂತ್ರಣ ರೇಖೆ ಬಳಿ ಭಾರತ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂದು ಭಾರತದ ಉಪ ಹೈಕಮಿಷನರ್ ಜೆ.ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಭಾನುವಾರ ಸಮನ್ಸ್ ನೀಡಿ ಪ್ರತಿಭಟನೆ ದಾಖಲಿಸಿದೆ. ಇದು ಈ ತಿಂಗಳಲ್ಲಿ ನೀಡಿದ ಐದನೇ ಸಮನ್ಸ್.

‘ಇದೇ 23ರಂದು ನಿಕಿಯಾಲ್ ವಲಯದಲ್ಲಿ ದಾಳಿ ನಡೆಸಿದ್ದರಿಂದ ಸಮನ್ಸ್ ನೀಡಿದ್ದಾರೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.