ಪೀಟರ್ಮಾರಿಟ್ಜ್ಬರ್ಗ್: ದಕ್ಷಿಣ ಆಫ್ರಿಕಾದ ಪೀಟರ್ಮಾರಿಟ್ಜ್ಬರ್ಗ್ ನಿಲ್ದಾಣದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ರೈಲಿನಿಂದ ಹೊರದಬ್ಬಿ ಜೂನ್ 7ಕ್ಕೆ 125 ವರ್ಷವಾಗಿದ್ದು, ಗುರುವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದೇ ರೈಲಿನಲ್ಲಿ ಪ್ರಯಾಣಿಸಿದರು.
ಇದೇ ನಿಲ್ದಾಣದಲ್ಲಿ ಗಾಂಧೀಜಿ ಅವರ ‘ಬರ್ತ್ ಆಫ್ ಸತ್ಯಾಗ್ರಹ’ ಎನ್ನುವ ಪುತ್ಥಳಿ ಹಾಗೂ ಡಿಜಿಟಲ್ ಸಂಗ್ರಹಾಲಯವನ್ನು ಸಹ ಅವರು ಅನಾವರಣಗೊಳಿಸಿದರು. ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸುಷ್ಮಾ ರೈಲು ಪ್ರಯಾಣದ ಚಿತ್ರ ಪೋಸ್ಟ್ ಮಾಡಿದ್ದಾರೆ.
ಗಾಂಧೀಜಿ ಅವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಆರಂಭಿಸಲು ಪೀಟರ್ಮಾರಿಟ್ಜ್ಬರ್ಗ್ ಘಟನೆ ಪ್ರೇರಣೆಯಾಗಿತ್ತು.
ಗಾಂಧೀಜಿಯನ್ನು ರೈಲಿನಿಂದ ಹೊರದಬ್ಬಿದ ಸಂದರ್ಭ ಸ್ಮರಿಸಲು ಗುರುವಾರ ಇಲ್ಲಿನ ಸಿಟಿ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಸುಷ್ಮಾ, ‘ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದಾಗಿ ವಿಶ್ವ ಉತ್ತಮಗೊಂಡಿದೆ. ಜಾಗತಿಕ ನಾಯಕತ್ವ ವಹಿಸಿಕೊಳ್ಳಲು ನಮ್ಮನ್ನು ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.
ಜಾಗತಿಕ ನಾಯಕರಾದ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರನ್ನು ಸುಷ್ಮಾ ಸ್ಮರಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.