ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬುಧವಾರ ಇಲ್ಲಿ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರ ಪುಣ್ಯತಿಥಿಯ ವೇದಿಕೆಯನ್ನು ತಮ್ಮ ವಿರೋಧಿಗಳ ಟೀಕೆಗೆ ಎದಿರೇಟು ನೀಡಲು ಬಳಸಿಕೊಂಡರು.
ಭುಟ್ಟೊ ಕುಟುಂಬದ ಪ್ರಭಾವಿ ಪ್ರದೇಶ ಗಾರ್ಹಿ ಖುದಾ ಬಕ್ಷ್ನಲ್ಲಿ ಬೆಳಿಗ್ಗೆ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಮತ್ತು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. `ಯಾವುದೇ ದಾಳಿಗೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ತಮಗಿದೆ~ ಎಂದೂ ಹೇಳಿದರು.
ಸ್ವಿಡ್ಜರ್ಲೆಂಡ್ನಲ್ಲಿ ಲೇವಾದೇವಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಮರುವಿಚಾರಣೆಗೆ ಒಳಪಡಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಸುಪ್ರೀಂಕೋರ್ಟ್ನ ನಿಲುವನ್ನು ಜರ್ದಾರಿ ತರಾಟೆಗೆ ತೆಗೆದುಕೊಂಡರು. `ಜನರು ಮಾಡಿರುವ ತೀರ್ಮಾನವನ್ನು ಇತಿಹಾಸ ಒಪ್ಪಿಕೊಂಡಿದೆ.
ಆದರೆ ನ್ಯಾಯಾಧೀಶರ ತೀರ್ಪನ್ನು ಒಪ್ಪಿಕೊಂಡಿಲ್ಲ, ಹೀಗಾಗಿ ಜನತೆ ತಮ್ಮಂದಿಗೆ ಇದ್ದಾರೆ~ ಎಂದರು.
`ಇಂದು ನಾನು ಹೋರಾಡುತ್ತಿದ್ದರೆ ಅಥವಾ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರ ವಕೀಲ ಐತ್ಜಾಜ್ ಅಹ್ಸಾನ್ ಅವರು ಸುಪ್ರೀಂಕೋರ್ಟ್ನಲ್ಲಿ ಹೋರಾಡುತ್ತಿದ್ದರೆ, ಅದಕ್ಕೆ ಜನರ ಬೆಂಬಲವೇ ಕಾರಣ. ಪಾಕಿಸ್ತಾನವು ಜನರ ಕೈಯಲ್ಲಿದ್ದು, ನಾವೆಂದಿಗೂ ತಪ್ಪಾಗಿರಲಾರೆವು~ ಎಂದು ಅವರು ನುಡಿದರು.
`ರಾಜಕೀಯ ಸಾಮರಸ್ಯ ನೀತಿಗೆ ಪಿಪಿಪಿ ಈಗಲೂ ಬದ್ಧವಾಗಿದೆ~ ಎಂದು ಪುನರುಚ್ಚರಿಸಿದ ಅವರು, ಪಾಕಿಸ್ತಾನ ಎದುರಿಸುತ್ತಿರುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರದೊಡನೆ ಕೈಜೋಡಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
ಬಿಲಾವಲ್ ಸವಾಲು:ಪಾಕಿಸ್ತಾನ ಸುಪ್ರೀಂಕೋರ್ಟ್, ಮಾಜಿ ಪ್ರಧಾನಿ ದಿವಂಗತ ಜುಲ್ಫಿಕರ್ ಅಲಿ ಭುಟ್ಟೊ ಅವರ `ನ್ಯಾಯಾಂಗ ಹತ್ಯೆ~ಯಲ್ಲಿ ನಿರ್ವಹಿಸಿದ ಪಾತ್ರವನ್ನು ತೀವ್ರ ಟೀಕಿಸಿರುವ ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ, ಹಾಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ `ದ್ವಿಮುಖ ನೀತಿ~ ಅನುಸರಿಸಿಲ್ಲ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮತ್ತು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವಂತೆ ಅದಕ್ಕೆ ಆಗ್ರಹಿಸಿದ್ದಾರೆ. `ಇತಿಹಾಸದ ಕಣ್ಣಿನಲ್ಲಿ ನಮಗೆ ಸಿಗಬೇಕಾದ ನ್ಯಾಯವನ್ನು ಪಿಪಿಪಿ ಕೊನೆಗೂ ಗಳಿಸುತ್ತದೆ ಎಂದರು.
ಗಿಲಾನಿ ವಿಮಾನ ತುರ್ತು ಭೂಸ್ಪರ್ಶ: ಈ ಮಧ್ಯೆ, ಜುಲ್ಫಿಕರ್ ಭುಟ್ಟೊ ಪುಣ್ಯತಿಥಿಯಲ್ಲಿ ಭಾಗವಹಿಸಲು ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಅವರ ಸಚಿವ ಸಹೋದ್ಯೋಗಿಗಳು ಪ್ರಯಾಣಿಸುತ್ತಿದ್ದ ವಿಮಾನವು ಮಂಗಳವಾರ ರಾತ್ರಿ ರಾವಲ್ಪಿಂಡಿಯ ಸೇನಾ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ತೊಂದರೆಯ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.
ಸಿಂಧ್ ಪ್ರಾಂತ್ಯದ ಸಕ್ಕರ್ಗೆ ತೆರಳುತ್ತಿದ್ದ ವಿಮಾನವು ಚಕ್ಲಾಲ ವಾಯುನೆಲೆಯಲ್ಲಿ ಇಳಿದಿದೆ. ಆದರೆ ಯಾರಿಗೂ ತೊಂದರೆಯಾಗಿಲ್ಲ ಎಂದು ಟಿವಿ ಚಾನೆಲ್ಗಳು ವರದಿ ಬಿತ್ತರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.