ADVERTISEMENT

ಜೆಸಿಂತಾ ಸಾವಿಗೆ ಡಿ.ಜೆಗಳೇ ಕಾರಣ

ಆತ್ಮಹತ್ಯೆ ಪತ್ರದಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 20:19 IST
Last Updated 16 ಡಿಸೆಂಬರ್ 2012, 20:19 IST
ಜೆಸಿಂತಾ ಸಾವಿಗೆ ಡಿ.ಜೆಗಳೇ ಕಾರಣ
ಜೆಸಿಂತಾ ಸಾವಿಗೆ ಡಿ.ಜೆಗಳೇ ಕಾರಣ   

ಲಂಡನ್ (ಪಿಟಿಐ): `ಆಸ್ಪತ್ರೆಗೆ ಕೀಟಲೆ ಕರೆ ಮಾಡಿದ ಆಸ್ಟ್ರೇಲಿಯಾದ ರೇಡಿಯೊ ನಿರೂಪಕರೇ ನನ್ನ ಸಾವಿಗೆ ಕಾರಣ' ಎಂದು ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನಾ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ.

ಸಾಯುವುದಕ್ಕೂ ಮುನ್ನ ಜೆಸಿಂತಾ ಬರೆದಿರುವ ಮೂರು ಪತ್ರಗಳಲ್ಲಿ ಒಂದರಲ್ಲಿ, ಆಸ್ಪತ್ರೆಗೆ ಕುಚೇಷ್ಟೆ ಕರೆ ಮಾಡಿದ್ದ ಆಸ್ಟ್ರೇಲಿಯಾ ಡಿಜೆಗಳಾದ ಮೆಲ್ ಗ್ರೆಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸಾವಿಗೆ ಅವರೇ ಕಾರಣ ಎಂದು ಬರೆದಿದ್ದಾರೆ ಎಂದು ಜೆಸಿಂತಾ ಕುಟುಂಬದ ಆಪ್ತ ಮೂಲಗಳ ಹೇಳಿಕೆಗಳನ್ನು ಉಲ್ಲೇಖಿಸಿ `ಡೈಲಿ ಮೇಲ್' ಭಾನುವಾರ ವರದಿ ಮಾಡಿದೆ.

ಜೆಸಿಂತಾ  ಶವವು ಲಂಡನ್ನಿನ ಕಿಂಗ್ ಎಡ್ವರ್ಡ್-7 ಆಸ್ಪತ್ರೆಯ ಸಿಬ್ಬಂದಿ  ವಸತಿ ಸಮುಚ್ಚಯದ ಅವರ ಕೊಠಡಿಯಲ್ಲಿ ಸ್ಕಾರ್ಫ್ ಬಿಗಿದುಕೊಂಡು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೀಟಲೆ ಕರೆ ಮಾಡಿದ ಒಂದು ಗಂಟೆ ನಂತರ ಇಬ್ಬರು ರೇಡಿಯೊ ನಿರೂಪಕರಲ್ಲಿ ಒಬ್ಬರು ಮತ್ತೆ ಆಸ್ಪತ್ರೆಗೆ ಕರೆ ಮಾಡಿ, ತಾವು ತಮಾಷೆಗಾಗಿ ಈ ಕರೆ ಮಾಡಿರುವುದಾಗಿ ಜೆಸಿಂತಾಗೆ ಹೇಳಿದ್ದು, ಆ ಕರೆಯಲ್ಲಿ ನೀಡಲಾದ ಮಾಹಿತಿ ರೇಡಿಯೊದಲ್ಲಿ ಬಿತ್ತರವಾಗಲಿವೆ ಎಂದೂ ತಿಳಿಸಿದ್ದರು ಎಂದು ಪತ್ರಿಕೆ ವರದಿ ಹೇಳಿದೆ.

ಡಿಜೆಗಳು ತಾವು ಮಾಡಿರುವ ಕರೆಯ ಉದ್ದೇಶವನ್ನು ಬಹಿರಂಗಗೊಳಿಸಿದ ಬಳಿಕ ಜೆಸಿಂತಾ ಗೊಂದಲಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದ್ದು, ಡಿಜೆಗಳ ವರ್ತನೆಯನ್ನು ಪ್ರತಿಭಟಿಸಿದ್ದರು ಎಂದು ಪತ್ರಿಕೆ ಹೇಳಿದೆ.

ಡಿಜೆಗಳು ತಾವು ಮಾಡಿರುವ ಕರೆಯ ಉದ್ದೇಶವನ್ನು ಬಹಿರಂಗಗೊಳಿಸಿದ ಬಳಿಕ ಜೆಸಿಂತಾ ಗೊಂದಲಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದ್ದು, ಡಿಜೆಗಳ ವರ್ತನೆಯನ್ನು ಪ್ರತಿಭಟಿಸಿದ್ದರು ಎಂದು ಪತ್ರಿಕೆ ಹೇಳಿದೆ.ಮತ್ತೊಂದು ಪತ್ರದಲ್ಲಿ ಜೆಸಿಂತಾ ಅವರು `ಆಸ್ಪತ್ರೆಯ ಸಿಬ್ಬಂದಿಯ ನಡವಳಿಕೆ'ಯನ್ನು ಟೀಕಿಸಿದ್ದರು.

ಹುಸಿ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಯಾವೊಬ್ಬ ಹಿರಿಯ ಸಿಬ್ಬಂದಿ ಜೆಸಿಂತಾ ಅವರನ್ನು ದೂಷಿಸಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದ್ದರೂ, ಇ-ಮೇಲ್ ಮೂಲಕ ಜೆಸಿಂತಾ ಅವರಿಗೆ ಸಹೋದ್ಯೋಗಿಗಳು ಛೀಮಾರಿ ಹಾಕಿರುವ ಸಾಧ್ಯತೆ ಇದೆ ಎಂದು ಪತ್ರಿಕೆ ಹೇಳಿದೆ.

ಪ್ರತಿಕ್ರಿಯೆಗೆ ಆಸ್ಪತ್ರೆ ನಕಾರ: ಈ ನಡುವೆ, ಜೆಸಿಂತಾ ಬರೆದಿರುವ ಆತ್ಮಹತ್ಯೆ ಪತ್ರಗಳ ಬಗ್ಗೆ ಪ್ರತಿಕ್ರಿಯಿಸಲು ಆಸ್ಪತ್ರೆ ನಿರಾಕರಿಸಿದೆ. ಹಿರಿಯ ಸಿಬ್ಬಂದಿ ಪತ್ರದ ಮೂಲ ಪ್ರತಿಗಳನ್ನು ನೋಡಿಲ್ಲ ಎಂದು ಆಸ್ಪತ್ರೆ ಹೇಳಿದೆ. ಜೆಸಿಂತಾ ಬರೆದಿರುವ ಪತ್ರಗಳು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ಬಳಿ ಇವೆ ಎಂದು ಹೇಳಲಾಗಿದೆ. ಪೊಲೀಸರು ಕುಟುಂಬಕ್ಕೆ ಪತ್ರದ ಪ್ರತಿಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ನಡುವೆ, ಜೆಸಿಂತಾ ಕುಟುಂಬ ಮತ್ತು ಆಸ್ಪತ್ರೆಯ ನಡುವಿನ ಸಂಬಂಧ ಹಳಸಿದೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. ಕುಟುಂಬ ಕೇಳಿದ ಕೆಲವು `ನಿಖರ' ಮಾಹಿತಿಗಳನ್ನು ಆಸ್ಪತ್ರೆಯ ಹಿರಿಯ ಮ್ಯಾನೇಜರ್‌ಗಳು ನೀಡಿಲ್ಲ ಎಂದು ತಿಳಿಸಿವೆ. ಕೀಟಲೆ ಕರೆ ಬಂದ ನಂತರದ 72 ಗಂಟೆಗಳ ಅವಧಿಯಲ್ಲಿ ಜೆಸಿಂತಾ ಒಂದು ಬಾರಿಗಿಂತ ಹೆಚ್ಚು ಸಲ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕುಟುಂಬದ ಸ್ನೇಹಿತರೊಬ್ಬರು ಹೇಳಿದ್ದಾರೆ.

`ಆಕೆ ಒಂದು ಬಾರಿಗಿಂತ ಹೆಚ್ಚು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರಬಹುದು. ಹೀಗಾಗಿ ಸಾಯುವುದಕ್ಕೂ ಮೊದಲು ಅವರು ಮೂರು ಪತ್ರ ಬರೆದಿದ್ದಾರೆ' ಎಂದು ಜೆಸಿಂತಾ ಸ್ನೇಹಿತರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.