ADVERTISEMENT

ಜೆಸಿಂತಾ ಸ್ಮರಣಾರ್ಥ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಲಂಡನ್ (ಪಿಟಿಐ): ಕೀಟಲೆ ಕರೆ ಹಿನ್ನೆಲೆಯಲ್ಲಿ ಲಂಡನ್‌ನ ಕಿಂಗ್ ಎಡ್ವರ್ಡ್-7 ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಮೂಲದ ನರ್ಸ್ ಜೆಸಿಂತಾ ಸಲ್ಡಾನ ಅವರ ಸ್ಮರಣಾರ್ಥ ಶನಿವಾರ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಬ್ರಿಸ್ಟಲ್‌ನಲ್ಲಿರುವ ಸಂತ ತೆರೇಸಾ ಚರ್ಚ್‌ನಲ್ಲಿ ನಡೆದ ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಬಾರ್ಬೋಜಾ, ಮಕ್ಕಳಾದ ಲಿಶಾ (14) ಮತ್ತು ಜುನಾಲ್ (16) ಹಾಗೂ ಸ್ನೇಹಿತರು ಭಾಗವಹಿಸಿದ್ದರು. ಜೆಸಿಂತಾ ಕುರಿತು ಚರ್ಚ್‌ನ ಪಾದ್ರಿ ಟಾಮ್ ಮಾತನಾಡಿದರು.

ನಂತರ ಮೇಣದ ಬತ್ತಿ ಹಚ್ಚುವ ಮೂಲಕ ಜೆಸಿಂತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನೆರೆದಿದ್ದವರಿಗೆ ಆಹ್ವಾನ ನೀಡಿದರು. ಚರ್ಚ್‌ನ ಪವಿತ್ರ ವೇದಿಕೆಯ ಬಳಿ ಜೆಸಿಂತಾ ಅವರ ಭಾವಚಿತ್ರವನ್ನಿಟ್ಟು ಅದರ ಸುತ್ತ ಹೂವುಗಳನ್ನು ಇಡಲಾಗಿತ್ತು.

ಇದೇ ವೇಳೆ ಜೆಸಿಂತಾ ಪತಿ ಮತ್ತು ಮಕ್ಕಳು ಚರ್ಚ್‌ನ ಪಾದ್ರಿಗಳ ಮೂಲಕ ಜೆಸಿಂತಾ ಅವರಿಗೆ ತಮ್ಮ ಅಂತಿಮ ನಮನಗಳನ್ನು ಸಲ್ಲಿಸಿದರು. ಸಂತ ತೆರೇಸಾ ಚರ್ಚ್‌ನ ಸಕ್ರಿಯ ಸದಸ್ಯೆಯಾಗ್ದ್ದಿದ ಜೆಸಿಂತಾ ಅವರು, ಪ್ರತಿ ವಾರ ಕುಟುಂಬದವರೊಂದಿಗೆ ಚರ್ಚ್‌ಗೆ ಭೇಟಿ ನೀಡುತ್ತಿದ್ದರು.

`ದಿಕ್ಕು ತೋಚದಂತಾಗಿದೆ'
ಲಂಡನ್(ಐಎಎನ್‌ಎಸ್)
:`ನಮಗೆ ದಿಕ್ಕು ತೋಚದಂತಾಗಿದೆ. ಬದುಕಿನಲ್ಲಿ ಒಂದು ಶೂನ್ಯ ಆವರಿಸಿದೆ...' ನರ್ಸ್ ಜೆಸಿಂತಾ ಸಾಲ್ಡಾನಾ ಅವರ ಪುತ್ರಿ ಲಿಶಾ (14) ಮತ್ತು ಪುತ್ರ ಜುನಾಲ್ (16) ಅವರ ನೋವಿನ ನುಡಿಗಳಿವು. ತಾಯಿಯನ್ನು ಕಳೆದುಕೊಂಡಿರುವ ಮಕ್ಕಳು, `ತಾಯಿಯಿಲ್ಲದ ಮನೆ  ಬಣಗುಡುತ್ತಿದೆ' ಎಂದು ದುಃಖ ವ್ಯಕ್ತಪಡಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT