ADVERTISEMENT

ದಾಳಿ ಮಾಡಿದವ ಗುತ್ತಿಗೆ ನೌಕರ

ಸತ್ತವರಲ್ಲಿ ಭಾರತ ಮೂಲದ ವಿಷ್ಣು ಪಂಡಿತ್‌ ಒಬ್ಬ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ನೌಕಾ­ಪಡೆಗೆ ಸೇರಿದ ಹಡಗುಕಟ್ಟೆಯ ಮೇಲೆ ಸೋಮವಾರ ಗುಂಡಿನ ದಾಳಿ ನಡೆ­ಸಿ­­ರುವುದು, ಮಾನಸಿಕ ಅಸ್ವಸ್ಥತೆ ಹೊಂದಿದ್ದ ರಕ್ಷಣಾ ಗುತ್ತಿಗೆ ನೌಕರ ಅರೋನ್‌ ಅಲೆಕ್ಸಿ (34) ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಭಾರತ ಮೂಲದ ರಕ್ಷಣಾ ಗುತ್ತಿಗೆದಾರ 61 ವರ್ಷದ ವಿಷ್ಣು ಪಂಡಿತ್‌ ಸೇರಿ 13 ಮಂದಿ ಮೃತ­ಪಟ್ಟಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸತ್ತ ಇತರ 12 ಮಂದಿಯೂ ಸೇನಾ ಗುತ್ತಿಗೆದಾರ­ರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಹಡಗು­ಕಟ್ಟೆಯೊಳಗೆ ನುಗ್ಗಿದ ಅರೋನ್‌ ಅಲೆಕ್ಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ. ದಾಳಿಕೋರ ಅಲೆಕ್ಸಿ ಕೂಡ ಸತ್ತಿದ್ದಾನೆ.

ಆದರೆ, ಈ ಕೃತ್ಯದ ಹಿಂದಿನ ಉದ್ದೇಶ ಮಾತ್ರ ರಹಸ್ಯವಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದು, ನಿದ್ರಾಹೀನತೆಯಿಂದ ಬಳಲುತ್ತಿದ್ದ. ತಲೆಯಲ್ಲಿ ವಿಚಿತ್ರ ಸದ್ದು ಕೇಳುತ್ತಿದೆ ಎನ್ನುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನಿಗೆ ಸ್ಥಳೀಯ ಅಥವಾ ಜಾಗತಿಕ ಭಯೋತ್ಪಾದಕರ ಜತೆ ನಂಟು ಇರಲಿಲ್ಲ ಎಂದೂ ಅಧಿಕಾರಿಗಳು ಸ್ಪಷ್ಟ­ಪಡಿಸಿದ್ದಾರೆ.

ಮಾನಸಿಕ ಕಾಯಿಲೆಗಾಗಿ ಅಲೆಕ್ಸಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆದರೆ, ನೌಕಾಪಡೆ ತನ್ನ ಗುತ್ತಿಗೆ ನೌಕರ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ಘೋಷಿಸಿ­ರಲಿಲ್ಲ. ವಾಷಿಂಗ್ಟನ್‌ ನೌಕಾನೆಲೆಗೆ ಪ್ರವೇಶ ಪಡೆಯು­ವಾಗ ಆತ ತನ್ನ ಅಧಿಕೃತ ಪಾಸ್‌ ಅನ್ನು ಬಳಸಿದ್ದ.

ಈತ ವರ್ಷದ ಹಿಂದೆ  ಟೆಕ್ಸಾಸ್‌ ಬಿಟ್ಟಿದ್ದ. ಸುಮಾರು ನಾಲ್ಕು ತಿಂಗಳ ಹಿಂದೆಯೇ ಹಡಗುಕಟ್ಟೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ. ನೌಕಾ ಪಡೆ ಮಾಹಿತಿ ಪ್ರಕಾರ ಈತ 2007ರ ಮೇ ತಿಂಗಳಿನಿಂದ 2011ರ ಜನವರಿ ವರೆಗೆ ಪೂರ್ಣಾವಧಿ ಮೀಸಲು ಸೈನಿಕನಾಗಿ ಕೆಲಸ ಮಾಡಿದ್ದ.

‘ಅಲೆಕ್ಸಿ ಹುಟ್ಟಿದ್ದು ನ್ಯೂಯಾರ್ಕ್ ನ ಕ್ವೀನ್ಸ್‌.  ಈತ ಕಡೆಯದಾಗಿ ವಾಸ ಮಾಡಿದ್ದು ಟೆಕ್ಸಾಸ್‌ ನಲ್ಲಿ’ ಎಂದು ಎಫ್‌ ಬಿಐ ಹೇಳಿಕೆಯಲ್ಲಿ ತಿಳಿಸಿದೆ.

‘ದಾಳಿಯ ಉದ್ದೇಶ ಏನು ಎನ್ನುವುದು ಈವರೆಗೆ ತಿಳಿದುಬಂದಿಲ್ಲ. ಆದರೆ ಇದು ಭಯೋತ್ಪಾದಕ ದಾಳಿಯಾಗಿರಲಿಕ್ಕೆ ಸಾಧ್ಯವಿಲ್ಲ’ ಎಂದು ವಾಷಿಂಗ್ಟನ್‌ ಡಿಸಿ ಮೇಯರ್‌ ವಿನ್ಸೆಂಟ್‌ ಗ್ರೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಬಾಮ ಖಂಡನೆ: ಘಟನೆಯನ್ನು ಖಂಡಿಸಿರುವ ಅಧ್ಯಕ್ಷ ಬರಾಕ್‌ ಒಬಾಮ, ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸುವಂತೆ ಆದೇಶ ನೀಡಿದ್ದಾರೆ.

ತನಿಖೆಯ ಸ್ಥಿತಿಗತಿಯನ್ನು ತಿಳಿದು­ಕೊಳ್ಳುವುದಕ್ಕೆ ಅವರು ಎಫ್‌ ಬಿಐ ನಿರ್ದೇಶಕ ಜೇಮ್ಸ್‌ ಕೊಮೆ ಅವರನ್ನು ಕರೆಸಿಕೊಂಡಿದ್ದರು.
ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರ ಬಳಸಿರುವುದು ‘ಯುದ್ಧ ಅಪರಾಧ’ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.