ADVERTISEMENT

ಧರ್ಮಗಳ ನಡುವೆ ಕಲಹ : ಶ್ರೀಲಂಕಾದಲ್ಲಿ 10 ದಿನ ತುರ್ತುಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 6 ಮಾರ್ಚ್ 2018, 10:54 IST
Last Updated 6 ಮಾರ್ಚ್ 2018, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ : ದೇಶದ ಮಧ್ಯ ಜಿಲ್ಲೆಯಾಗಿರುವ ಕ್ಯಾಂಡಿಯಲ್ಲಿ ಧಾರ್ಮಿಕ ಸಮೂಹಗಳ ನಡುವೆ ಆರಂಭವಾಗಿರುವ ಕಲಹ ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯಲು ಶ್ರೀಲಂಕಾ ಸರ್ಕಾರ ಹತ್ತು ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಸರ್ಕಾರದ ವಕ್ತಾರರು ಇಂದು ತಿಳಿಸಿದ್ದಾರೆ.

ಈ ಜಿಲ್ಲೆಯಲ್ಲಿ ಒಂದು ವರ್ಷದಿಂದ ಬಹುಸಂಖ್ಯಾತರಾದ ಸಿಂಹಳಿಯ ಬೌದ್ಧರು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂಮರ ನಡುವೆ ಸಂಘರ್ಷ ನಡೆಯುತ್ತಿದೆ.

ಬೌದ್ಧ ಮತದ ತೀವ್ರಗಾಮಿಗಳ ಸಮೂಹ ‘ಅಲ್ಪಸಂಖ್ಯಾತರು ಬೌದ್ಧರನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದಾರೆ. ಬೌದ್ಧರ ಪುರಾತನ ಸ್ಥಳಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ಆರೋಪಿಸಿದೆ. ಅಲ್ಲದೆ ಮಯನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಕೆಲವು ಬೌದ್ಧ ರಾಷ್ಟ್ರೀಯವಾದಿಗಳು ಪ್ರತಿಭಟಿಸಿದ್ದಾರೆ. 

ADVERTISEMENT

‘ದೇಶದಲ್ಲಿ ಕೋಮು ಗಲಭೆಗಳು ಹರಡದಂತೆ ತಡೆಯಲು, ಸಂಪುಟದ ವಿಶೇಷ ಸಭೆ ಕರೆದು ಹತ್ತು ದಿನಗಳ ಕಾಲ ತುರ್ತುಪರಿಸ್ಥಿತಿ ಜಾರಿ ಮಾಡಲು ನಿರ್ಧರಿಸಲಾಯಿತು’ ಎಂದು ವಕ್ತಾರ ದಯಾಸಿರಿ ಜಯಸೆಖರಾ ಮಾಧ್ಯಮಗಳಿಗೆ ತಿಳಿಸಿದರು.

‘ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠೋರ ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಣಯ ತಳೆದೆವು’ ಎಂದು ಅವರು ಹೇಳಿದರು.

ಕ್ಯಾಂಡಿಯಲ್ಲಿನ ಮುಸ್ಲಿಮರ ಮಾಲೀಕತ್ವದ ಅಂಗಡಿಗಳಿಗೆ ಕಿಡಿಗೇಡಿಗಳು ಸೋಮವಾರ ಬೆಂಕಿ ಹಚ್ಚಿರುವುದರಿಂದ, ಅಲ್ಲಿ ನಿಷೇದಾಜ್ಞೆ ಜಾರಿ ಮಾಡಿ, ಹೆಚ್ಚಿನ ಪೊಲೀಸ್‌ರನ್ನು ನಿಯೋಜನೆ ಮಾಡಲಾಗಿದೆ. ದೇಶದ್ಯಾಂತ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.