
ಇಸ್ಲಾಮಾಬಾದ್ (ಪಿಟಿಐ): 2010ರಲ್ಲಿ ಅಪಹರಣ ಮಾಡಿದ್ದ 23 ಸೈನಿಕರ ಶಿರಚ್ಛೇದ ಮಾಡಿರುವುದಾಗಿ ಪಾಕಿಸ್ತಾನದ ತಾಲಿಬಾನ್ ಸಂಘಟನೆ ಹೇಳಿಕೊಂಡಿದೆ.
ಈ ಬೆಳವಣಿಗೆಯಿಂದಾಗಿ ಪಾಕ್ ಸರ್ಕಾರ ಮತ್ತು ತಾಲಿಬಾನ್ ನಡುವಣ ಶಾಂತಿ ಮಾತುಕತೆ ಪ್ರಕ್ರಿಯೆಗೆ ಭಾರಿ ಹಿನ್ನಡೆಯಾಗಿದೆ.
ಈ ಮಧ್ಯೆ, ತಾಲಿಬಾನ್ ಮುಖಂಡರೊಂದಿಗೆ ಸೋಮವಾರ ನಿಗದಿಯಾಗಿದ್ದ ಸಭೆಯನ್ನು ಪಾಕಿಸ್ತಾನದ ಸಂಧಾನಕಾರರು ರದ್ದುಪಡಿಸಿದ್ದಾರೆ.
ಪ್ರತೀಕಾರದ ಕೃತ್ಯ: ಪಾಕಿಸ್ತಾನದ ವಿವಿಧ ಕಡೆಗಳಲ್ಲಿ ಬಂಧನದಲ್ಲಿರುವ ತಾಲಿಬಾನ್ ಸದಸ್ಯರನ್ನು ಹತ್ಯೆ ಮಾಡಿರುವುದಕ್ಕೆ ಪ್ರತಿಯಾಗಿ ಫ್ರಾಂಟಿಯರ್ ಕಾರ್ಪ್ಸ್ನ (ಎಫ್ಸಿ) 23 ಯೋಧರನ್ನು ಭಾನುವಾರ ಶಿರಚ್ಛೇದ ಮಾಡಿರುವುದಾಗಿ ಪಾಕಿಸ್ತಾನದ ತೆಹ್ರಿಕ್–ಎ–ತಾಲಿಬಾನ್ (ಟಿಟಿಪಿ) ಮುಖ್ಯಸ್ಥ ಉಮರ್ ಖಾಲಿದ್ ಖುರಸಾನಿ, ಭಾನುವಾರ ತಡರಾತ್ರಿ ಮಾಧ್ಯಮಗಳಿಗೆ ಕಳುಹಿಸಿದ್ದ ವಿಡಿಯೊ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.
ಮೊಹಮ್ಮದ್ ಪ್ರಾಂತ್ಯದ ಶೊಂಗಾರಿ ತಪಾಸಣಾ ಠಾಣೆಯಿಂದ 2010ರಲ್ಲಿ ಈ ಯೋಧರನ್ನು ಅಪಹರಣ ಮಾಡಲಾಗಿತ್ತು. ‘ಒಂದು ಕಡೆ ಶಾಂತಿ ಮಾತುಕತೆಗೆ ಮುಂದಾಗಿರುವ ಸರ್ಕಾರವು ಮತ್ತೊಂದು ಕಡೆ ಟಿಟಿಪಿ ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಮುಂದುವರಿಸಿದೆ’ ಎಂದು ಹೇಳಿಕೆಯಲ್ಲಿ ಉಮರ್ ಆರೋಪಿಸಿದ್ದಾನೆ.
‘ನಮ್ಮ ಸದಸ್ಯರನ್ನು ಹತ್ಯೆ ಮಾಡಿದವರ ವಿರುದ್ಧ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದು ತಿಳಿದಿದೆ ಎಂದು ಸರ್ಕಾರಕ್ಕೆ ಸ್ಪಷ್ಟನೆ ನೀಡಲು ನಾವು ಬಯಸುತ್ತೇವೆ’ ಎಂದು ಹೇಳಿರುವ ಉಮರ್, ‘ಒಂದು ವೇಳೆ ಸರ್ಕಾರ ತನ್ನ ನಿಲುವು ಬದಲಾಯಿಸದೇ ಇದ್ದರೆ, ಭವಿಷ್ಯದಲ್ಲಿ ನಮ್ಮ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರಲಿದೆ’ ಎಂದು ಎಚ್ಚರಿಸಿದ್ದಾನೆ.
ಯೋಧರ ಶಿರಚ್ಛೇದ ಮಾಡುತ್ತಿರುವ ವಿಡಿಯೊವನ್ನು ಶೀಘ್ರದಲ್ಲಿ ಬಿಡುಗಡೆಮಾಡುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭೇಟಿ ರದ್ದು: ಟಿಟಿಪಿ ಹೇಳಿಕೆ ಹೊರ ಬಿದ್ದ ಕೂಡಲೇ ಸೋಮವಾರ ನಿಗದಿಯಾಗಿದ್ದ ತಾಲಿಬಾನ್ ಮುಖಂಡರ ಭೇಟಿಯಿಂದ ಪಾಕ್ ಸರ್ಕಾರದ ಸಂಧಾನಕಾರರು ಹಿಂದೆ ಸರಿದರು. ಪಾಕಿಸ್ತಾನ ತಾಲಿಬಾನ್ ಜೊತೆಗಿನ ಮಾತುಕತೆಗೆ ಸಂಬಂಧಿಸಿದ ವಿದ್ಯಮಾನಗಳು ಸೂಕ್ತ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಹೇಳಿ ಸಂಧಾನಕಾರರು ಭೇಟಿಯನ್ನು ರದ್ದುಗೊಳಿಸಿದರು.
ತೆಹ್ರಿಕ್–ಎ–ತಾಲಿಬಾನ್ ಸಂಘಟನೆಯೊಂದಿಗೆ ಶಾಂತಿ ಮಾತುಕತೆ ನಡೆಸುವುದಕ್ಕಾಗಿ ಪಾಕಿಸ್ತಾನ ಸರ್ಕಾರ ಸಮಿತಿಯನ್ನು ರಚಿಸಿತ್ತು.
ಸಮಿತಿಯ ತುರ್ತು ಸಭೆಯನ್ನು ಮಂಗಳವಾರ ಕರೆಯಲಾಗಿದೆ. ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದಲ್ಲಿ ಕೈಗೊಳ್ಳ-ಬೇಕಾದ ಕ್ರಮಗಳ ಬಗ್ಗೆ ಸಭೆಯು ಚರ್ಚಿಸಲಿದೆ ಎಂದು ಸಮಿತಿಯ ಸಂಚಾಲಕ ಇರ್ಫಾನ್ ಸಿದ್ದಿಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಷರೀಫ್ ಖಂಡನೆ
ನಿರ್ಣಾಯಕ ಹಂತದಲ್ಲಿರುವ ಶಾಂತಿ ಮಾತುಕತೆಗೆ ಭಂಗ ತರುವ ಉದ್ದೇಶದಿಂದ 23 ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಉಗ್ರರ ಕೃತ್ಯವನ್ನು ಖಂಡಿಸಿರುವ ಅವರು, ಇಂತಹ ಘಟನೆಗಳು ಶಾಂತಿ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಈ ರಕ್ತಪಾತವನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ’ ಎಂದೂ ಷರೀಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.