ಪಾಕ್ನಲ್ಲಿ ಭಾರತದ ಕಾನೂನು ತಜ್ಞರು
ಪ್ರಜಾವಾಣಿ ವಾರ್ತೆ Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಇಸ್ಲಾಮಾಬಾದ್ (ಪಿಟಿಐ): ವಾಣಿಜ್ಯ ನಗರ ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂ ಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಪಾಕಿ ಸ್ತಾನದ ಎರಡನೇ ನ್ಯಾಯಾಂಗ ಆಯೋಗ ಮುಂದಿನ ವರ್ಷ ಭಾರತಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಪ್ರಸ್ತಾಪಿಸ ಬೇಕಾದ ವಿಷಯಗಳನ್ನು ನಿಯಮಬದ್ಧ ವಾಗಿ ಚರ್ಚಿಸಿ ಅಂತಿಮಗೊಳಿಸಲು ಭಾರತೀಯ ಕಾನೂನು ತಜ್ಞರ ತಂಡ ಬುಧವಾರ ಇಸ್ಲಾಮಾಬಾದ್ಗೆ ಬಂದಿಳಿದಿದೆ.
ಕೇಂದ್ರ ಗೃಹ ಸಚಿವಾ ಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ನಾಲ್ವರು ಸದಸ್ಯರ ತಂಡದಲ್ಲಿ ಅಜ್ಮಲ್ ಕಸಾಬ್ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಿದ ಅಭಿ ಯೋಜಕ ಉಜ್ವಲ್ ನಿಕ್ಕಂ ಕೂಡಾ ಒಬ್ಬರಾಗಿದ್ದಾರೆ. ಗೃಹ ಮತ್ತು ವಿದೇ ಶಾಂಗ ಸಚಿವಾಲಯದ ಕಾನೂನು ಪರಿಣತರ ತಂಡ ಬುಧವಾರ ರಾತ್ರಿಯೇ ಇಲ್ಲಿಗೆ ಆಗಮಿಸಿದ್ದು ಈಗಾಗಲೇ ಮಾತು ಕತೆ ಆರಂಭಿಸಿದೆ. ಅಟಾರ್ನಿ ಜನರಲ್ ಇರ್ಫಾನ್ ಖಾದಿರ್ ಮತ್ತು ಇತರ ಹಿರಿಯ ಅಧಿಕಾರಿಗಳ ಜತೆ ಎರಡು ದಿನ ಚರ್ಚೆ ನಡೆಸಲಿರುವ ತಂಡ, ವಿಚಾ ರಣೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯ ಗಳನ್ನು ಅಂತಿಮಗೊಳಿಸಲಿದೆ.
ಮುಂಬೈ ದಾಳಿ ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳ ಹೇಳಿಕೆ ಪಡೆ ಯಲು ಆಗಮಿಸಿದ್ದ ಪಾಕ್ನ ಮೊದಲ ನ್ಯಾಯಾಂಗ ಆಯೋಗದ ಸದಸ್ಯರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದ ರಿಂದ ಆಯೋಗ ನೀಡಿದ ವರದಿಯನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾ ಲಯ ತಿರಸ್ಕರಿಸಿತ್ತು. ಹೀಗಾಗಿ ಪಾಕ್ ಸರ್ಕಾರ ಎರಡನೇ ನ್ಯಾಯಾಂಗ ಆಯೋಗವನ್ನು ನೇಮಕ ಮಾಡಿದೆ.
ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಇತ್ತೀಚೆಗೆ ಭಾರ ತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಅವರೊಂದಿಗೆ ನಡೆ ಸಿದ ಮಾತುಕತೆಯ ಫಲವಾಗಿ ಎರಡನೇ ನ್ಯಾಯಾಂಗ ಆಯೋಗವು ಸಾಕ್ಷ್ಯ ಸಂಗ್ರಹಿಸಲು ಜನವರಿ 2 ಅಥವಾ 3ರಂದು ನೆರೆಯ ರಾಷ್ಟ್ರಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲಿನ ನ್ಯಾಯಾಂಗ ಆಯೋಗ ನೀಡಿದ ವರದಿ ತಿರಸ್ಕೃತವಾದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲ ಮುಂಜಾಗ್ರತೆ ವಹಿಸಲಾಗಿದೆ. ಮುಂಬೈ ಮೇಲಿನ ದಾಳಿ ಪ್ರಕರಣವನ್ನು ನಿರ್ವಹಿಸಿರುವ ಮತ್ತು ಪಾಕಿಸ್ತಾನ ಹಾಗೂ ಭಾರತದ ಕಾನೂನು ಒಂದೇ ರೀತಿಯಾಗಿರುವುದರಿಂದ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕ್ಕಂ ಅವ ರನ್ನು ತಂಡದಲ್ಲಿ ಸೇರಿಸಿಕೊಳ್ಳ ಲಾಗಿದ್ದು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ `ಸಾಕ್ಷಿ ಗಳನ್ನು ಪ್ರಶ್ನಿಸುವ ಅವಕಾಶ' ನೀಡುವುದು ಕಗ್ಗಾಂಟಾಗಿ ಪರಿಣಮಿಸಿದೆ.
ಭಯೋತ್ಪಾದನೆ ನಿಗ್ರಹ ಮಸೂದೆಗೆ ಅಸ್ತು
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬೇಹುಗಾರಿಕೆ ಮತ್ತು ರಕ್ಷಣಾ ಇಲಾಖೆಗಳಿಗೆ ಪರಮಾಧಿಕಾರ ನೀಡುವ ವಿವಾದಿತ `ಭಯೋತ್ಪಾದನಾ ನಿಗ್ರಹ ಮಸೂದೆ'ಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ (ಸಂಸತ್) ಗುರುವಾರ ಅನುಮೋದನೆ ನೀಡಿದೆ. ಎಸ್ಎಂಎಸ್, ಇ-ಮೇಲ್ ದಾಖಲೆ ಸಂಗ್ರಹ ಮತ್ತು ಶಂಕಿತರ ಚಟುವಟಿಕೆಗಳ ಮೇಲೆ ನೇರವಾಗಿ ಕಣ್ಗಾವಲಿಡುವ ಪರಮಾಧಿಕಾರವನ್ನು ಬೇಹುಗಾರಿಕೆ ಮತ್ತು ರಕ್ಷಣಾ ಇಲಾಖೆಗಳಿಗೆ ಈ ಮಸೂದೆ ಅವಕಾಶ ಕಲ್ಪಿಸಲಿದೆ.
`ಭಯೋತ್ಪಾದಕರು, ವಿದ್ವಂಸಕ ಕೃತ್ಯಗಳಲ್ಲಿ ತೊಡಗಿರುವ ದುಷ್ಕರ್ಮಿಗಳು, ರಾಷ್ಟ್ರೀಯ ಏಕತೆಗೆ ಧಕ್ಕೆ ತರುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಸೂದೆ ರೂಪಿಸಲಾಗಿದೆಯೇ ಹೊರತು ಸಾಮಾನ್ಯ ಜನರನ್ನಲ್ಲ' ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಪಕ್ಷಬೇಧ ಮರೆತು ಎಲ್ಲ ಸದಸ್ಯರೂ ಮಸೂದೆಯನ್ನು ಬೆಂಬಲಿಸಿದ್ದನ್ನು ಶ್ಲಾಘಿಸಿದ ಪ್ರಧಾನಿ ರಜಾ ಪರ್ವೇಜ್ ಅಶ್ರಫ್, `ಇಡೀ ದೇಶ, ರಾಜಕೀಯ ಪಕ್ಷಗಳು ಒಂದಾಗಿ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ಅವಿರೋಧವಾಗಿ ಮಸೂದೆ ಅಂಗೀಕಾರವಾಗಿರುವುದೇ ಸಾಕ್ಷಿ' ಎಂದರು.