ADVERTISEMENT

ಭಾರತದ ಉಮೇದುವಾರಿಕೆಗೆ ಆಘ್ಘನ್‌ ಬೆಂಬಲ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪರ್ಯಾಯ ಸದಸ್ಯತ್ವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ವಿಶ್ವಸಂಸ್ಥೆ (ಪಿಟಿಐ): ಭಾರತವು ಏಷ್ಯಾ ಪೆಸಿಫಿಕ್‌ ವಲಯದ ಪ್ರತಿನಿಧಿಯಾಗಿ 2021–22 ಸಾಲಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪರ್ಯಾಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದೆ. ಭಾರತವನ್ನು ಬೆಂಬಲಿಸಿ ಆಫ್ಘಾನಿಸ್ತಾನವು ಉಮೇದುವಾರಿಕೆ ಹಿಂತೆಗೆದುಕೊಂಡ ನಂತರ ಈ ಅರ್ಜಿ ಸಲ್ಲಿಸಲಾಯಿತು.

‘ಭದ್ರತಾ ಮಂಡಳಿಯ ಪರ್ಯಾಯ ಸದಸ್ಯ ಸ್ಥಾನಕ್ಕೆ ನಾವು ಉಮೇದುವಾರಿಕೆ ಸಲ್ಲಿಸಿದ್ದೇವೆ. ಇದಕ್ಕಾಗಿ 2020ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್‌ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಆಫ್ಘಾನಿಸ್ತಾನ ತಮ್ಮ ನಿರ್ಧಾ­ರ­ವನ್ನು ವಿಶ್ವಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳ ರಾಯಭಾರ ಕಚೇರಿಗಳಿಗೂ ತಿಳಿಸಿವೆ.
ಆಫ್ಘಾನಿಸ್ತಾನ ಕೂಡ 2021–22ನೇ ಸಾಲಿಗೆ ಪರ್ಯಾಯ ಸದಸ್ಯತ್ವಕ್ಕೆ ಸ್ಪರ್ಧಿಸುವ ಇರಾದೆ ಹೊಂದಿತ್ತು. ಆದರೆ, ಭಾರತದೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಅದು ಉಮೇದು­ವಾರಿಕೆ ವಾಪಸ್‌ ಪಡೆಯುವ ನಿರ್ಧಾರಕ್ಕೆ ಬಂತು.

‘ಆಫ್ಘಾನಿಸ್ತಾನ ಭಾರತದ ಬೆಂಬಲಕ್ಕೆ ನಿಂತು ತನ್ನ ಉಮೇದುವಾರಿಕೆ ಹಿಂಪಡೆದದ್ದು ಅಚ್ಚರಿಯ ಬೆಳವಣಿಗೆ’ ಎಂದು ಅಶೋಕ್‌
ಮುಖರ್ಜಿ ಅಭ್ರಿಪ್ರಾಯಪಟ್ಟಿದ್ದಾರೆ. ‘ಉಭಯ ರಾಷ್ಟ್ರಗಳ ನಡುವಣ ದೀರ್ಘಕಾಲೀನ, ನಿಕಟ ಹಾಗೂ ಸ್ನೇಹಮಯ ಬಾಂಧವ್ಯವನ್ನು ಪರಿಗಣನೆಗೆ ತೆಗೆದುಕೊಂಡು ಭಾರತವನ್ನು ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಆಫ್ಘಾನಿಸ್ತಾನ ರಾಯಭಾರ ಮಂಡಳಿ ಹೇಳಿದೆ.

ಭಾರತವು ಉಮೇದುವಾರಿಕೆ ಸಲ್ಲಿಸಿರುವ ವಿಷಯವನ್ನು ಏಷ್ಯಾ ಪೆಸಿಫಿಕ್‌ ವಲಯದ ಎಲ್ಲಾ 54 ರಾಷ್ಟ್ರಗಳಿಗೂ ತಿಳಿಸಿದೆ. ಭಾರತವು ಈ ಮುನ್ನ 2011–12ನೇ ಸಾಲಿನಲ್ಲಿ ಜಗತ್ತಿನ 15 ಪ್ರಬಲ ರಾಷ್ಟ್ರಗಳ ಮಂಡಳಿಯ ಪರ್ಯಾಯ ಸದಸ್ಯನಾಗಿ ಆಯ್ಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.