ಅಬುಧಾಬಿ (ಪಿಟಿಐ): ಇಲ್ಲಿ ನಡೆದ ಜಾಗತಿಕ ಕೌಶಲ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಹಿಟ್ಟಿನ ಭಕ್ಷ್ಯ ಮತ್ತು ಮಿಠಾಯಿ ತಯಾರಿಕೆಯಲ್ಲಿ ಮೋಹಿತ್ ದುಡೇಜಾ ಬೆಳ್ಳಿ ಮತ್ತು ಮೂಲಮಾದರಿ ವಿನ್ಯಾಸದಲ್ಲಿ ಕಿರಣ್ ಕಂಚಿನ ಪದಕ ಗಳಿಸಿದ್ದಾರೆ. 28 ಸ್ಪರ್ಧಿಗಳನ್ನೊಳಗೊಂಡ ಭಾರತ ತಂಡದ ಒಂಬತ್ತು ಸದಸ್ಯರು ಕೌಶಲ ಉತ್ಕೃಷ್ಟತಾ ಪದಕವನ್ನೂ ಗೆದ್ದಿದ್ದಾರೆ.
2007ರಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಭಾರತದ ಸ್ಪರ್ಧಿಗಳು ತೋರಿರುವ ಉತ್ತಮ ಸಾಧನೆ ಇದಾಗಿದೆ. 2009ರಲ್ಲಿ ಬೆಳ್ಳಿ ಮತ್ತು 2015ರಲ್ಲಿ ಉತ್ಕೃಷ್ಟತೆಯ ಐದು ಪದಕಗಳನ್ನು ಗೆದ್ದಿರುವುದು ಇದುವರೆಗೆ ಭಾರತೀಯ ಸ್ಪರ್ಧಿಗಳು ತೋರಿದ ಉತ್ತಮ ಸಾಧನೆಯಾಗಿತ್ತು.
ವಿವಿಧ ಬಗೆಯ 51 ಕೌಶಲಗಳನ್ನು ಒಳಗೊಂಡ ವಿಭಾಗಗಳ ಸ್ಪರ್ಧೆಯಲ್ಲಿ ಈ ಬಾರಿ 59 ದೇಶಗಳ 1,300 ಸ್ಪರ್ಧಿಗಳು ಭಾಗವಹಿಸಿದ್ದರು ಎಂದು ವಿಶ್ವ ಕೌಶಲ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಕಟ್ರಾನಿಕ್ಸ್ (ಹೊಸ ಉತ್ಪಾದನಾ ತಂತ್ರಗಳ ಅಭಿವೃದ್ಧಿಗಾಗಿ ಮೆಕ್ಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎರಡನ್ನೂ ಬಳಸಿಕೊಳ್ಳುವ ವಿಜ್ಞಾನ ಶಾಖೆ), ರೆಸ್ಟೋರೆಂಟ್ ಸೇವೆ, ಆಟೊಮೊಬೈಲ್ ತಂತ್ರಜ್ಞಾನ, ಆಭರಣ ತಯಾರಿಕೆ, ಗ್ರಾಫಿಕ್ ವಿನ್ಯಾಸ ತಂತ್ರಜ್ಞಾನ, ಮೊಬೈಲ್ ರೋಬೊಟಿಕ್ಸ್, ಸೌಂದರ್ಯ ಚಿಕಿತ್ಸೆ ಮುಂತಾದ ಕ್ಷೇತ್ರಗಳಲ್ಲಿ ಕೌಶಲ ಉತ್ಕೃಷ್ಟತಾ ಪದಕಗಳು ಭಾರತೀಯರ ಪಾಲಾಗಿವೆ.
‘ಕೌಶಲ ಒಲಿಂಪಿಕ್ ಸ್ಪರ್ಧೆಯಲ್ಲಿ ಯುವ ತಂಡ ತೋರಿದ ದಿಟ್ಟತನ, ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ದೇಶ ಸ್ಫೂರ್ತಿ ಪಡೆಯಬೇಕು. ಚೀನಾ, ರಷ್ಯಾ, ಕೊರಿಯಾ, ಜಪಾನ್, ಬ್ರೆಜಿಲ್ನಂತಹ ದೇಶಗಳ ಎದುರು ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಭಾರತೀಯರು ಸಾಬೀತುಪಡಿಸಿದ್ದಾರೆ’ ಎಂದು ಭಾರತ ತಂಡದ ಮುಖ್ಯಸ್ಥ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.