ADVERTISEMENT

ಭೂ ಪರಿಸರ ವ್ಯವಸ್ಥೆಗೆ ಜಿರಲೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಲಂಡನ್ (ಐಎಎನ್‌ಎಸ್):  ಜಿರಲೆ ಎಂದೊಡನೆ ಅಸಹ್ಯ ಪಡುವವರೇ ಹೆಚ್ಚು. ಆದರೆ ಇನ್ನು ಮುಂದೆ ಜನರು ಈ ವರ್ತನೆಯನ್ನು ಬಿಡಲೇ ಬೇಕಾಗಿದೆ. ಭೂಮಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಜಿರಲೆಗಳು ಅತೀ ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭೂಮಿಯಲ್ಲಿರುವ ಸಾರಜನಕವನ್ನು (ನೈಟ್ರೋಜನ್) ಜಿರಲೆಗಳು ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ ಎಂದು ಜೀವವಿಜ್ಞಾನ ತಜ್ಞರು ಪ್ರತಿಪಾದಿಸಿದ್ದಾರೆ.ಜಿರಲೆಗಳು ಸಾಮಾನ್ಯವಾಗಿ ಶುಚಿಯಾಗಿಲ್ಲದ ಪ್ರದೇಶದಲ್ಲಿ ವಾಸಿಸುತ್ತವೆ. ಹಾಗಾಗಿ ಜಿರಲೆಗಳನ್ನು ಕಂಡ ಕೂಡಲೇ ಜನರು ಅವುಗಳ ನಿರ್ಮೂಲನೆಗಾಗಿ ಯತ್ನಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಆದರೆ, ಇಡೀ ಜಿರಲೆ ಸಮೂಹ ಸತ್ತು ಬೀಳುತ್ತಿರುವುದನ್ನು ಕಂಡು ಕೆಲವೇ ಕೆಲವು ಜನರಷ್ಟೇ ಕಣ್ಣೀರು ಸುರಿಸಬೇಕಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.`ಜಿರಲೆಗಳ ಅಳಿಯುವಿಕೆಯು ಭೂಮಿಯ ಪರಿಸರ ವ್ಯವಸ್ಥೆಯಲ್ಲಿರುವ ಸಾರಜನಕ ವೃತ್ತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ~ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಭಾರತೀಯ ಮೂಲದ ಶ್ರೀನಿ ಕಂಪಾಪತಿ ಎಚ್ಚರಿಸಿದ್ದಾರೆ.

`ಜಿರಲೆಗಳು ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ವಸ್ತುಗಳಲ್ಲಿ ಸಾಕಷ್ಟು ಪ್ರಮಾಣದ ಸಾರಜನಕ ಇರುತ್ತವೆ. ಇವುಗಳನ್ನು ಸೇವಿಸಿದ ಜಿರಲೆಗಳು ವಿಸರ್ಜಿಸುವ ತ್ಯಾಜ್ಯವು (ಮಲ ರೂಪದ) ಮಣ್ಣಿಗೆ ಸೇರುತ್ತವೆ. ಇವುಗಳನ್ನು ಸಸ್ಯಗಳು ಬಳಸುತ್ತವೆ~ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.