ADVERTISEMENT

ಭ್ರಷ್ಟಾಚಾರದ ವಿರುದ್ಧದ ಒಪ್ಪಂದ;ಎಲ್ಲರೂ ಅನುಮೋದಿಸಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ವಿಶ್ವಸಂಸ್ಥೆ(ಪಿಟಿಐ): ಭ್ರಷ್ಟಾಚಾರವನ್ನು ಸಮರೋಪಾದಿಯಲ್ಲಿ ನಿರ್ಮೂಲನೆ ಮಾಡುವಂತೆ ಜಾಗತಿಕ ಸಮುದಾಯಕ್ಕೆ ಮನವಿ ಮಾಡಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆ ರೂಪಿಸಿರುವ ಒಪ್ಪಂದವನ್ನು ಎಲ್ಲ ದೇಶಗಳೂ ಅನುಮೋದಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತರ ದೇಶಗಳಲ್ಲಿ ಅಡಗಿಸಿಟ್ಟಿರುವ ಕಪ್ಪುಹಣ, ಅಕ್ರಮ ಸಂಪತ್ತನ್ನು ಆಯಾ ದೇಶಗಳು ಮರಳಿ ಪಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರದ ಅಗತ್ಯವಿದ್ದು, ಈ ಒಡಂಬಡಿಕೆಗೆ ಎಲ್ಲರೂ ಸಹಿ ಹಾಕುವ ಅಗತ್ಯವಿದೆ ಎಂದು ಅಡ್ವಾಣಿ ಹೇಳಿದ್ದಾರೆ.

ವಿಶ್ವಸಂಸ್ಥೆಯ 67ನೇ ಮಹಾಅಧಿವೇಶನದ ಅಂಗವಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ವ್ಯವಹಾರಗಳ ಸಮಿತಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಭ್ರಷ್ಟಾಚಾರವು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ದೇಶಗಳನ್ನೆರಡನ್ನೂ ಸಮಾನವಾಗಿ ಕಾಡುತ್ತದೆ. ಆದರೆ, ಅದರ ಪರಿಣಾಮ ಅಭಿವೃದ್ಧಿಶೀಲ ದೇಶಗಳ ಮೇಲೆ ಹೆಚ್ಚಿರುತ್ತದೆ.
 
ಏಕೆಂದರೆ ಭ್ರಷ್ಟಾಚಾರ ಜನರಿಗೆ ನೀಡುವ ಸೌಲಭ್ಯಗಳನ್ನು ಕಡಿತಗೊಳಿಸುತ್ತದೆ. ಜನರ ಮೇಲೆ ನೇರ ಪರಿಣಾಮ ಬೀರುತ್ತದೆ~ `ಕಪ್ಪು ಹಣ ಹಾಗೂ ಲೆಕ್ಕಕ್ಕೆ ಸಿಗದ ಹಣ ದಶಕಗಳ ಕಾಲ ಒಂದೆಡೆ ಸಂಗ್ರಹವಾಗುವುದರಿಂದ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗುತ್ತದೆ. ಹೂಡಿಕೆ ಕುಸಿದು, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ~

ಅದಕ್ಕಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಸರ್ಕಾರಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತ್ವ ಹಾಗೂ ಉತ್ತರದಾಯಿತ್ವ ತರುವ ಅಗತ್ಯವಿದೆ ಎಂದೂ ಅಡ್ವಾಣಿ ಪ್ರತಿಪಾದಿಸಿದರು.

ಯುಪಿಎ ಸರ್ಕಾರ ಹೊಗಳಿದ ಅಡ್ವಾಣಿ
ವಿಶ್ವಸಂಸ್ಥೆ(ಪಿಟಿಐ): ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ವಿರೋಧ ಪಕ್ಷಗಳ ಟೀಕೆ ಎದುರಿಸುತ್ತಿರುವ ಯುಪಿಎ ಸರ್ಕಾರವನ್ನು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹೊಗಳಿದ ಘಟನೆ ನಡೆದಿದೆ.

ಯುಪಿಎ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ `ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ~ ಯೋಜನೆಯನ್ನು ಹೊಗಳಿರುವ ಅಡ್ವಾಣಿ ಅವರು ಭಾರತದ ಗ್ರಾಮೀಣ ಸಮುದಾಯದ ಸಬಲೀಕರಣಕ್ಕೆ ಈ ಯೋಜನೆ ಸಹಕಾರಿಯಾಗಿದೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಪುನಶ್ಚೇತನ ನೀಡಿದೆ ಎಂದು ಹೇಳಿದ್ದಾರೆ.

ಇದು ಇಡೀ ಜಗತ್ತಿನಲ್ಲೇ ಇಂತಹ ಅತಿದೊಡ್ಡ ಯೋಜನೆಯಾಗಿದ್ದು, 5.3 ಕೋಟಿ ಬಡವರಿಗೆ 100 ದಿನಗಳ ಕಾಲ ಕಡ್ಡಾಯ ಉದ್ಯೋಗ ಹಾಗೂ ಕೂಲಿ ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಸಮಾನತೆ ಹೊಡೆದೊಡಿಸಲು ಇದು ಸಹಕಾರಿಯಾಗಿದೆ ಎಂದೂ ಅವರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.