ADVERTISEMENT

ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ಗಲ್ಲು ಪರಿಹಾರವಲ್ಲ: ಅಮ್ನೆಸ್ಟಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ಲಂಡನ್‌(ಪಿಟಿಐ): ಭಾರತದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಕೊನೆ ಹೇಳಲು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದು ಪರಿಹಾರ ಎನಿಸದು. ಬದಲಾಗಿ ಈ ಕುರಿತು ವ್ಯಾಪಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಕ್ಷಮಾದಾನ ಸಂಸ್ಥೆ (ಅಮ್ನೆಸ್ಟಿ) ಹೇಳಿದೆ.

ಕಳೆದ ಡಿಸೆಂಬರ್‌ 16ರಂದು ದೆಹಲಿಯಲ್ಲಿ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ನಿರ್ದೇಶಕಿ ತಾರಾ ರಾವ್‌, ‘ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಘಟನೆ ನಿಜಕ್ಕೂ ಘೋರ ಅಪರಾಧವಾಗಿದ್ದು, ಕುಟುಂಬದವರಿಗೆ ನಾವು ಅತೀವ ಸಂತಾಪ ಸೂಚಿಸಿದ್ದೇವೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಗಲ್ಲು ಶಿಕ್ಷೆ ಯಾವತ್ತೂ ಇದಕ್ಕೆ ಉತ್ತರ ಎನಿಸುವುದಿಲ್ಲ’ ಎಂದರು.

ಗಲ್ಲು ಶಿಕ್ಷೆ ವಿಧಿಸುವುದು ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಪರಿಹಾರ ಎನಿಸದು. ಈ ನಾಲ್ವರನ್ನು ನೇಣಿನ ಕುಣಿಕೆಗೆ ತಳ್ಳುವುದರಿಂದ ಅಲ್ಪಾವಧಿ ಪ್ರತೀಕಾರ ಸಾಧಿಸಿದಂತಾಗುತ್ತದೆ, ಇದೇ ಹೊತ್ತಿಗೆ ಪ್ರಕರಣದ ಕುರಿತು ಎದ್ದ ವ್ಯಾಪಕ ಆಕ್ರೋಶವೂ ಸಹಜವಾದದ್ದೇ. ಅಧಿಕಾರಿಗಳು ಇದಕ್ಕೆಲ್ಲ ಪರಿಹಾರವಾಗಿ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು  ತಪ್ಪಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.