ವಾಷಿಂಗ್ಟನ್ (ಪಿಟಿಐ): ದುಬೈ ಬಂದರಿನಲ್ಲಿ ಅಮೆರಿಕದ ನೌಕಾಪಡೆಯ ಸಿಬ್ಬಂದಿಯ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಭಾರತೀಯ ಮೀನುಗಾರನ ಪ್ರಕರಣವನ್ನು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಲಾಗುವುದು ಎಂದು ಅಮೆರಿಕ ಭಾರತಕ್ಕೆ ಭರವಸೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 18ರಂದು ಅಮೆರಿಕದ ವಿದೇಶಾಂಗ ಸಚಿವಾಲಯದ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ವೆಂಡಿ ಶೆರ್ಮನ್ ಅವರು ಅಮೆರಿಕದ ಭಾರತೀಯ ರಾಯಭಾರಿ ನಿರುಪಮ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಪ್ರಕರಣ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು ಎಂದು ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
`ಘಟನೆ ಬಗ್ಗೆ ಅಮೆರಿಕ ಸಮಗ್ರ ತನಿಖೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವ ಅಂಶಗಳನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು~ ಎಂದು ವೆಂಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 16ರಂದು ದುಬೈ ಬಂದರಿನಲ್ಲಿ ಅಮೆರಿಕದ ನೌಕಾ ಸಿಬ್ಬಂದಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದರ ಪರಿಣಾಮ ಒಬ್ಬ ಮೀನುಗಾರ ಸತ್ತು, ಇತರ ಮೂವರು ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.