ADVERTISEMENT

ರವೂಫ್‌ ಮನವೊಲಿಕೆ ಅಸಾಧ್ಯ: ಪಿಸಿಬಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಕರಾಚಿ (ಪಿಟಿಐ): ಐಪಿಎಲ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಗೆ ‘ಬೇಕಾಗಿರುವ’ ಅಂಪೈರ್‌ ಅಸದ್‌ ರವೂಫ್‌ ಅವರನ್ನು ಭಾರತಕ್ಕೆ ಕಳುಹಿಸುವಂತಹ ಯಾವುದೇ ‘ವ್ಯವಸ್ಥೆ’ ನಮ್ಮಲ್ಲಿ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೇಳಿದೆ.

ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಟ್ಟಿಯಲ್ಲಿ ರವೂಫ್‌ ಹೆಸರೂ ಇದೆ. ಮಾತ್ರವಲ್ಲ, ವಿಚಾರಣೆಗೆ ಹಾಜರಾಗುವಂತೆ ಮುಂಬೈ ನ್ಯಾಯಾಲಯ ರವೂಫ್‌ಗೆ ಸಮನ್ಸ್‌ ನೀಡಿದೆ.

ರವೂಫ್‌ ಅವರನ್ನು ಭಾರತಕ್ಕೆ ಕಳುಹಿಸಲು ನಮಗೆ ಸಾಧ್ಯವಿಲ್ಲ ಎಂದು ಪಿಸಿಬಿಯ ಕಾನೂನು ಸಲಹೆಗಾರ ತಫಜ್ಜುಲ್‌ ರಿಜ್ವಿ ಸೋಮವಾರ ಹೇಳಿದ್ದಾರೆ.

‘ಅವರು ಈಗಾಗಲೇ ಅಂಪೈರ್‌ ವೃತ್ತಿಯಿಂದ ದೂರವಾಗಿದ್ದಾರೆ. ಇದು ರವೂಫ್‌, ಮುಂಬೈ ಪೊಲೀಸರು, ಐಪಿಎಲ್‌ ಹಾಗೂ ಐಸಿಸಿಗೆ ಸಂಬಂಧಿಸಿದ ವಿಷಯ. ಪಿಸಿಬಿಗೆ ಇಲ್ಲಿ ಮಾಡುವಂತಹದ್ದು ಏನೂ ಇಲ್ಲ’ ಎಂದು ನುಡಿದಿದ್ದಾರೆ.

‘ಮುಂಬೈಗೆ ತೆರಳುವಂತೆ ರವೂಫ್‌ ಮನವೊಲಿಸಲು ಅಥವಾ ಒತ್ತಡ ಹೇರಲು ನಮಗೆ ಅಸಾಧ್ಯ. ಆದರೆ ನಮ್ಮ ಮುಂದೆ ಒಂದು ದಾರಿ ಇದೆ.  ಪಾಕಿಸ್ತಾನದಲ್ಲೇ ಅವರ ಹೇಳಿಕೆಯನ್ನು ಪಡೆಯಬಹುದು’ ಎಂದಿದ್ದಾರೆ. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಅಥವಾ ಬೆಟ್ಟಿಂಗ್‌ನಲ್ಲಿ ನಾನು ಭಾಗಿಯಾಗಿಲ್ಲ ಎಂದು ರವೂಫ್‌ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.