ADVERTISEMENT

ರಹಸ್ಯ ಕಾಪಾಡಿರುವ ಭಾರತ: ಇಸ್ರೇಲ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST

ಜೆರುಸಲೇಂ (ಪಿಟಿಐ):  ದೆಹಲಿಯಲ್ಲಿ ಫೆ. 13ರಂದು ಇಸ್ರೇಲ್ ರಾಯಭಾರಿ ಪತ್ನಿ ಮೇಲೆ ನಡೆದ ದಾಳಿಯಲ್ಲಿ ಇರಾನ್ ಕೈವಾಡವಿದೆ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದ್ದರೂ ಇರಾನ್ ಜತೆ ನೇರ ಸಂಘರ್ಷಕ್ಕೆ ಇಳಿಯಲು ಬಯಸದ ಭಾರತ ಈ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು `ಹಾರೆಟ್ಜ್~ ಪತ್ರಿಕೆಗೆ ಈ ವಿಚಾರ ತಿಳಿಸಿದ್ದು, ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬೇಹುಗಾರಿಕಾ ಸಂಸ್ಥೆಗಳು ಸಾಕಷ್ಟು ಸಾಕ್ಷ್ಯ ಕಲೆ ಹಾಕಿವೆ. ಈ ಪ್ರಕರಣದ ತನಿಖೆ ಮುಕ್ತಾಯದ ಹಂತ ತಲುಪಿದೆ ಎಂದಿದ್ದಾರೆ.

ಹಾಗೆಂದು ಭಾರತೀಯ ಅಧಿಕಾರಿಗಳು ಈ ವಿಚಾರವನ್ನು ಮುಚ್ಚಿಹಾಕಿಲ್ಲ. ಅಮೆರಿಕ ಮತ್ತು ಇಸ್ರೇಲ್ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಫೋಟಕ್ಕೆ ಬಳಸಲಾದ ಬೈಕ್ ಯಾರು ಖರೀದಿಸಿದ್ದರು, ದಾಳಿಕೋರರು ಯಾವಾಗ ಭಾರತಕ್ಕೆ ಬಂದಿದ್ದರು ಎಂಬ ಮಾಹಿತಿಯೆಲ್ಲ ಆ  ಅಧಿಕಾರಿಗಳ ಬಳಿ ಇದೆ ಎಂದು ಇಸ್ರೇಲ್ ಅಧಿಕಾರಿ ವಿವರಿಸಿದ್ದಾರೆ.

ಭಾರತದ ಭದ್ರತಾ ಸಂಸ್ಥೆಗಳು ಈ ಸ್ಫೋಟದ ಘಟನೆಯನ್ನು ಇನ್ನೂ ತನಿಖೆಯಲ್ಲಿರುವ ಪ್ರಕರಣ ಎಂದು ಪರಿಗಣಿಸಿವೆ. ಹಾಗಾಗಿ ಅವುಗಳ ಮೇಲೆ ವಿವರ ಬಹಿರಂಗಗೊಳಿಸುವ ಒತ್ತಡ ತಗ್ಗಿದೆ. ಅಲ್ಲದೇ ಪ್ರಕರಣವನ್ನು ಹೇಗೆ  ಮುಂದುವರಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದಕ್ಕೆ ಹಾಕಲಾಗಿದೆ.

ದೆಹಲಿಯಲ್ಲಿ ಸ್ಫೋಟ ನಡೆದ ಕೆಲವೇ ಕ್ಷಣಗಳಲ್ಲಿ ಜಾರ್ಜಿಯಾ, ಥಾಯ್ಲೆಂಡ್‌ಗಳಲ್ಲೂ ಸ್ಫೋಟದ ವಿಫಲ ಯತ್ನ ನಡೆದಿರುವುದರಿಂದ ಭಾರತದ ಅಧಿಕಾರಿಗಳು ಆ ದೇಶಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲಿಯೂ ಸಹ ಇರಾನ್ ಕೈವಾಡ ಇರುವುದು ಸಾಬೀತಾಗಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.