ADVERTISEMENT

ವಿಶ್ವಸಂಸ್ಥೆ ಮೊರೆ ಹೋದ ಇಟಲಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 12:55 IST
Last Updated 18 ಮಾರ್ಚ್ 2014, 12:55 IST

ವಿಶ್ವಸಂಸ್ಥೆ (ಪಿಟಿಐ): ಕೆರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತದ ವಶದಲ್ಲಿರುವ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಸಹಾಯ ಮಾಡುವಂತೆ ಕೋರಿ ಇಟಲಿಯು ವಿಶ್ವಸಂಸ್ಥೆಯ ಮೊರೆ ಹೋಗಿದೆ.

`ನೌಕಾ ಸಿಬ್ಬಂದಿ ವಿಚಾರಣೆಯನ್ನು ಇಟಲಿಯಲ್ಲಿ ನಡೆಸಲು ಸಿದ್ಧರಿದ್ದೇವೆ, ಆದರೆ ನಾವು ಅವರಿಗೆ ಸ್ವಾತಂತ್ರ್ಯ ನೀಡಬೇಕೆಂದು ಕೋರುತ್ತೇವೆ' ಎಂದು ಇಟಲಿಯ ಒಳಾಡಳಿತ ಸಚಿವ ಆಂಜೋಲಿನೊ ಅಲ್ಫಾನೋ ಅವರು ಹೇಳಿದರು ಎಂದು ಉಲ್ಲೇಖಿಸಿ ಎಎನ್‌ಎಸ್‌ಎ ಸುದ್ಧಿಸಂಸ್ಥೆ ವರದಿ ಮಾಡಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರೊಂದಿಗೆ ಭೇಟಿಗೂ ಮುನ್ನ ಅಲ್ಫಾನೋ ಈ ಹೇಳಿಕೆ ನೀಡಿದ್ದಾರೆ.

ನೌಕಾ ಸಿಬ್ಬಂದಿಯನ್ನು ತಾಯ್ನಾಡಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೊ ದೇಶಗಳ ಸಹಯೋಗದ ಅಂತರರಾಷ್ಟ್ರೀಯ ಮಟ್ಟದ ರ‌್ಯಾಲಿಯನ್ನು ನಡೆಸಲು ಇಟಲಿ ಪ್ರಯತ್ನಿಸುತ್ತಿದೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ಕೇರಳದ ಅಲಪ್ಪುಝಾ ಕರಾವಳಿ ಪ್ರದೇಶದಲ್ಲಿ ಇಟಲಿಯ ಎಂ.ಟಿ. ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ನೌಕಾ ಸಿಬ್ಬಂದಿ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದಿದ್ದರು. ಈ ಘಟನೆಯು ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಸಧ್ಯ ಆರೋಪಿಗಳಾದ ಮಾಸ್ಸಿ ಮಿಲಿಯಾನೊ ಲಾಟೊರ‌್ರೆ ಮತ್ತು ಸಾಲ್ವಟೋರ್ ಗಿರೋನ್ ಅವರು ದೆಹಲಿಯಲ್ಲಿರುವ ಇಟಲಿ ರಾಯಭಾರಿ ಕಚೇರಿಯಲ್ಲಿ ತಂಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.