
ವಿಶ್ವಸಂಸ್ಥೆ (ಪಿಟಿಐ): ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ವಿಶ್ವಾಸವನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ವ್ಯಕ್ತಪಡಿಸಿದ್ದಾರೆ.
 
 ‘ಸಾಮಾನ್ಯ ಸಭೆಗೆ ಅದರಲ್ಲೂ ಜಾಗತಿಕ ತಾಪಮಾನ ಕುರಿತಾದ ಶೃಂಗಸಭೆಯಲ್ಲಿ ಮೋದಿ ಅವರು ಪಾಲ್ಗೊಳ್ಳುತ್ತಾರೆ ಎಂದು ಬಾನ್  ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ’ ಎಂದು ಬಾನ್ ಅವರ ವಕ್ತಾರ ಸ್ಟೆಫ್ನೆ ಡ್ಯೂಜಾರಿಕ್ ಸುದ್ದಿಗಾರರಿಗೆ ತಿಳಿಸಿದರು.
 
 ಜಾಗತಿಕ ತಾಪಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಯ ಪರಿಹಾರದಲ್ಲಿ ಭಾರತದ ಪಾತ್ರ ಮಹತ್ತರವಾಗಿದ್ದು ಸೆಪ್ಟೆಂಬರ್ನಲ್ಲಿ ಈ ಸಂಬಂಧ ನಡೆಯಲಿರುವ ಶೃಂಗಸಭೆಯಲ್ಲಿ ಮೋದಿ ಅವರ ಉಪಸ್ಥಿತಿ ಎದುರು ನೋಡಲಾಗುತ್ತಿದೆ’ ಎಂದರು.
 
 ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನೇತೃತ್ವವಹಿಸುತ್ತಿರುವ ಮೋದಿ ಅವರನ್ನು ಅಭಿನಂದಿಸಿ ಬಾನ್ ಕಿ ಮೂನ್ ಈಚೆಗೆ ಸಂದೇಶ ಕಳುಹಿಸಿದ್ದರು.
 ತಮ್ಮನ್ನು ಅಭಿನಂದಿಸಿದ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಧನ್ಯವಾದ ಅರ್ಪಿಸಿ ಮೋದಿ ಟ್ವೀಟ್ ಮಾಡಿದ್ದು , ‘ವಿಶ್ವದ ಅಭಿವೃದ್ಧಿ ಹಾಗೂ ಶಾಂತಿಗಾಗಿ ಭಾರತದ ಯತ್ನವನ್ನು ಮುಂದುವರೆಸಲಾಗುವುದು’ ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.