ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಜೈಲಿನಲ್ಲಿ ಬಂಧಿತರಾಗಿರುವ ಹಾಗೂ ಮರಣದಂಡನೆಗೆ ಗುರಿಯಾಗಿರುವ ಸರಬಜೀತ್ ಸಿಂಗ್ ಅವರಿಗೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕ್ಷಮಾಧಾನ ನೀಡುವ ಹಕ್ಕಿಲ್ಲ ಎಂಬ ಆರೋಪ ಈಗ ನ್ಯಾಯಾಲಯದ ಮುಂದಿದೆ.
ದಶಕದ ಹಿಂದೆ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಭಾರತದ ಪಂಜಾಬ್ ಪ್ರಾಂತ್ಯದ ಸರಬಜೀತ್ ಬಂಧಿತರಾಗಿದ್ದರು. ಇವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆಯನ್ನೂ ವಿಧಿಸಿತ್ತು. ಆದರೆ ಭಾರತ ಸರ್ಕಾರ ಹಾಗೂ ಸರಬಜೀತ್ ಕುಟುಂಬ ಮಾಡಿರುವ ಮನವಿಯ ಮೇರೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಕ್ಷಮಾಧಾನ ನೀಡಿದ್ದರು.
ಇದೀಗ ಜರ್ದಾರಿ ಅವರ ಕ್ರಮವನ್ನು ಪ್ರಶ್ನಿಸಿ ರಾಣಾ ಇಲ್ಲಾಮುದ್ದಿನ್ ಘಾಜಿ ಎಂಬುವವರು ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸವಿಂಧಾನದ 45ನೇ ಪರಿಚ್ಛೇದದ ಪ್ರಕಾರ ಅಧ್ಯಕ್ಷರು ನೀಡಿರುವ ಕ್ಷಮಾಧಾನ ಖುರಾನ್ ಹಾಗೂ ಸುನ್ನಾಃಕ್ಕೆ ವಿರುದ್ಧವಾಗಿದೆ. ಏಕೆಂದರೆ ಆರೋಪಿಯಿಂದ ತೊಂದರೆಗೊಳಗಾದ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಕ್ಷಮಾಧಾನ ನೀಡುವ ಹಕ್ಕಿಲ್ಲ ಎಂದು ಖುರಾನ್ ನಲ್ಲಿ ಹೇಳಲಾಗಿದೆ~ ಎಂದು ಅವರು ತಮ್ಮ ವಾಕಾಲತ್ತಿನಲ್ಲಿ ಹೇಳಿದ್ದಾರೆ.
ಇದರೊಂದಿಗೆ ಖುರಾನ್ ಹಾಗೂ ಸುನ್ನಾಃ ಕ್ಕೆ ವಿರುದ್ಧವಾಗಿರುವ ಪರಿಚ್ಛೇದ 45 ಅನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಅವರು ನ್ಯಾಯಾಲಯವನ್ನು ಕೇಳಿದ್ದಾರೆ. ಸರಬಜೀತ್ ಅವರ ಪುತ್ರಿ ದಲ್ಬಿರ್ ಕೌರ್ ಅವರು ಪಾಕಿಸ್ತಾನಕ್ಕೆ ಆಗಮಿಸಿ ಇಲ್ಲಿನ ಪ್ರಧಾನಿ ಹಾಗೂ ಅಧ್ಯಕ್ಷರ ಅನುಕಂಪ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಸ್ಲಾಂ ಪ್ರಕಾರ ಆರೊಪಿಯಿಂದ ನೊಂದವರ ಕುಟುಂಬದವರನ್ನು ಹೊರತುಪಡಿಸಿ ಅಧ್ಯಕ್ಷರಿಗಾಗಲಿ ಅಥವಾ ಪ್ರಧಾನಿಗಾಗಲೀ ಕ್ಷಮೆ ನಿಡುವ ಹಕ್ಕಿಲ್ಲ ಎಂದು ತಮ್ಮ ವಕಾಲತ್ತಿನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.