ಕಠ್ಮಂಡು (ಪಿಟಿಐ): ಸಾರ್ಕ್ ರಾಷ್ಟ್ರಗಳಲ್ಲಿನ ಅಭಿವೃದ್ಧಿ ಗುರಿಯನ್ನು 2012ರಿಂದ 2015ರವರೆಗೆ ವಿಸ್ತರಿಸುವ ನಿರ್ಧಾರವನ್ನು ಭಾರತ ಸೇರಿದಂತೆ 8 ಸಾರ್ಕ್ ರಾಷ್ಟ್ರಗಳು ತೆಗೆದುಕೊಂಡಿವೆ.
ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಮೂರನೇ ಸಾರ್ಕ್ ರಾಷ್ಟ್ರಗಳ ಸಚಿವರುಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಜೊತೆಗೆ ಬಡತನ ನಿರ್ಮೂಲನೆ ಮಾಡಲು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮೂರು ಹಂತದ ಯೋಜನೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನೇಪಾಳ ಮಧ್ಯಂತರ ಚುನಾವಣಾ ಸರ್ಕಾರದ ಮುಖ್ಯಸ್ಥ ಖಿಲ್ ರಾಜ್ ರೆಗ್ಮಿ, `ಬಡತನ ಎನ್ನುವುದು ಹಿಂಸೆಯ ಮೂರ್ತ ರೂಪ' ಎಂದು ಮಹಾತ್ಮಾ ಗಾಂಧಿಯವರ ಮಾತನ್ನು ನೆನಪಿಸಿದರಲ್ಲದೆ, ಜಂಟಿ ಕಾರ್ಯಗಳ ಮೂಲಕ ಬಡತನದ ವಿರುದ್ಧ ಹೋರಾಡಬೇಕಿದೆ ಎಂದರು.
`ಸಾರ್ಕ್ನ ಸಹಸ್ರಮಾನದ ಗುರಿ ಸಾಧಿಸುವಲ್ಲಿ ಪ್ರಯತ್ನ ನಡೆಸುವುದಾಗಿ ಸಾರ್ಕ್ ಮಹಾಪ್ರಧಾನ ಕಾರ್ಯದರ್ಶಿ ಅಹಮದ್ ಸಲೀಂ ತಿಳಿಸಿದರು. ಯೋಜನಾ ಆಯೋಗದ ಪ್ರಧಾನ ಸಲಹೆಗಾರ್ತಿ ವಂದನಾ ಕುಮಾರಿ ಜೆನಾ ನೇತೃತ್ವದ ನಾಲ್ವರು ಸದಸ್ಯರ ಭಾರತೀಯ ನಿಯೋಗ ಭಾಗವಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.