ಡಮಾಸ್ಕಸ್ (ಎಎಫ್ಪಿ): ಕಳೆದ 13 ತಿಂಗಳುಗಳಿಂದ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಅರಬ್ ಒಕ್ಕೂಟದ ಪ್ರತಿನಿಧಿ ಕೋಫಿ ಅನ್ನಾನ್ ಅವರು ನೀಡಿದ್ದ ಅಂತಿಮ ಗಡುವನ್ನು ಪರಿಗಣಿಸಿರುವ ಸಿರಿಯಾ, ಕದನವಿರಾಮಕ್ಕೆ ಒಪ್ಪಿಕೊಂಡಿದೆ.
ಅಂತರ ರಾಷ್ಟ್ರೀಯ ಕಾಲಮಾನದಂತೆ ಗುರುವಾರ ಬೆಳಿಗ್ಗೆ 8.30ಕ್ಕೆ ಕದನವಿರಾಮ ಜಾರಿಗೆ ಬಂದಿದ್ದು, ರಾಷ್ಟ್ರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸುವುದಾಗಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ತಿಳಿಸಿದ್ದಾರೆ. ಆದರೆ ವಿರೋಧಿ ಬಣಗಳು ಯಾವುದೇ ಭಯೋತ್ಪಾದನಾ ಕೃತ್ಯಗಳಿಗೆ ಮುಂದಾದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಇದೇ ಸಂದರ್ಭದಲ್ಲಿ ಅವರು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಅಂತಿಮ ಗಡುವನ್ನು ಸರ್ಕಾರ ಗೌರವಿಸಿದರೆ ತಾವೂ ಅದಕ್ಕೆ ಬದ್ಧರಾಗಿರುವುದಾಗಿ ವಿರೋಧಿ ಬಣಗಳು ಹೇಳಿವೆ.ಜನರಿಗೆ ನೀಡಿದ ಭರವಸೆ ಈಡೇರಿಸಲು ವಿಫಲರಾಗಿರುವುದಕ್ಕೆ ಬಶರ್ ಅಂತರ ರಾಷ್ಟ್ರೀಯ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದರು. ಬಶರ್ ಸರ್ಕಾರವನ್ನು ಅದರ ಕಾರ್ಯಗಳಿಂದ ಅಳೆಯಲಾಗುತ್ತದೆಯೇ ಹೊರತು ಕೇವಲ ಭರವಸೆಗಳಿಂದ ಅಲ್ಲ ಎಂದು ಅಮೆರಿಕ ಕೂಡ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.
ಕಳೆದ ವರ್ಷದ ಮಾರ್ಚ್ 15ರಂದು ಬಶರ್ ಸರ್ಕಾರದ ವಿರುದ್ಧ ದಂಗೆ ಆರಂಭವಾದಾಗಿನಿಂದ ಇದುವರೆಗೆ ಸುಮಾರು ಹತ್ತು ಸಾವಿರದಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ನಾಗರಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.