ವಾಷಿಂಗ್ಟನ್ (ಪಿಟಿಐ): ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ದೆಹಲಿಯ ವಿಚಾರಣಾ ನ್ಯಾಯಾಲಯವೊಂದರ ಮುಂದೆ ಉಗ್ರರಾದ ಡೇವಿಡ್ ಹೆಡ್ಲಿ ಮತ್ತು ತಹಾವೂರ್ ರಾಣಾ ಅವರನ್ನು ಹಾಜರುಪಡಿಸುವ ಯತ್ನಕ್ಕೆ 1997ರಲ್ಲಿ ಭಾರತ-ಅಮೆರಿಕ ನಡುವಿನ ಅಪರಾಧಿಗಳ ಹಸ್ತಾಂತರ ಒಪ್ಪಂದವು ಹಿನ್ನಡೆ ಉಂಟು ಮಾಡಿದೆ.
ಈ ಒಪ್ಪಂದದ ಪ್ರಕಾರ, ಅಪರಾಧವೊಂದರಲ್ಲಿ ಶಿಕ್ಷೆಗೊಳಗಾದ ಅಥವಾ ಆರೋಪಮುಕ್ತನಾದ ವ್ಯಕ್ತಿಯನ್ನು ಹಸ್ತಾಂತರ ಮಾಡಲು ಅವಕಾಶ ಇಲ್ಲದಿರುವುದು ಈಗ ಹೆಡ್ಲಿ ಮತ್ತು ರಾಣಾ ಪ್ರಕರಣದಲ್ಲೂ ಇದು ಅನ್ವಯವಾಗುತ್ತದೆ ಎನ್ನಲಾಗಿದೆ.
ಮಾರ್ಚ್ 13ರೊಳಗೆ ಹೆಡ್ಲಿ ಮತ್ತು ರಾಣಾ ಅವರನ್ನು ಹಾಜರುಪಡಿಸುವಂತೆ ದೆಹಲಿಯ ನ್ಯಾಯಾಲಯವೊಂದು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಆದೇಶಿಸಿರುವ ಬಗ್ಗೆ ರಾಣಾರ ಅಟಾರ್ನಿ ಪ್ಯಾಟ್ರಿಕ್ ಬೆಲೆಗಾನ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ ಈ ಅಂಶವನ್ನು ಬಹಿರಂಗಪಡಿಸಿದರು.
ಈ ಆರೋಪಿಗಳಿಬ್ಬರ ಹಸ್ತಾಂತರ ಸಂಬಂಧ ಅಮೆರಿಕಕ್ಕೆ ಭಾರತೀಯ ರಾಯಭಾರಿಯಾಗಿರುವ ನಿರುಪಮಾ ರಾವ್ ಅವರು ಅಮೆರಿಕದ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಎಲ್ಲ ನೆರವಿನ ಭರವಸೆ ಪಡೆದ ವರದಿಗಳ ಹಿನ್ನೆಲೆಯಲ್ಲಿ ಬೆಲೆಗಾನ್ ಅವರನ್ನು ಪ್ರಶ್ನಿಸಲಾಗಿ, ಅಮೆರಿಕದ ನ್ಯಾಯಾಲಯ ಹಸ್ತಾಂತರಕ್ಕೆ ಅನುಮತಿ ನೀಡುವುದಿಲ್ಲ ಎಂದು ನುಡಿದರು.
ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ನಿರ್ವಾಹಕರಾದ ಪಾಕ್ ಮೂಲದ ಅಮೆರಿಕ ರಾಷ್ಟ್ರೀಯ ಹೆಡ್ಲಿ ಮತ್ತು ಪಾಕ್ ಸಂಜಾತ ಕೆನಡಾ ಪ್ರಜೆ ಆಗಿರುವ ಆತನ ಬಾಲ್ಯ ಸ್ನೇಹಿತ ರಾಣಾ ಪ್ರಸ್ತುತ ಷಿಕಾಗೊ ಜೈಲಿನಲ್ಲಿದ್ದು, ಸ್ಥಳೀಯ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗುವುದನ್ನು ಎದುರು ನೋಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.