ಕರಾಚಿ: ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ರೈಲು ಮತ್ತು ಬಸ್ ನಡುವೆ ಶುಕ್ರವಾರ ಭೀಕರ ಅಪಘಾತ ಸಂಭವಿಸಿ, 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ರೋಹ್ರಿ ರೈಲ್ವೆ ನಿಲ್ದಾಣದಬಳಿ ಈ ದುರ್ಘಟನೆ ನಡೆದಿದೆ.ರಾವಲ್ಪಿಂಡಿಯಿಂದ ಕರಾಚಿ ಕಡೆಗೆ ಬರುತ್ತಿದ್ದ ‘45 ಯುಪಿ ಪಾಕಿಸ್ತಾನ್ ಎಕ್ಸ್ಪ್ರೆಸ್’ ರೈಲು ಮತ್ತುಪಂಜಾಬ್ ಕಡೆಗೆ ತೆರಳುತ್ತಿದ್ದ ಬಸ್ ನಡುವೆ ಡಿಕ್ಕಿಯಾಗಿದೆ.ಬಸ್ನಲ್ಲಿ 50 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು.
‘ರೈಲು ಅತಿ ವೇಗವಾಗಿ ಬರುತ್ತಿತ್ತು. ಇದೇ ವೇಳೆ ಬಸ್ ಚಾಲಕ ಕಾವಲು ರಹಿತ ರೈಲ್ವೆ ಕ್ರಾಸಿಂಗ್ ದಾಟಲು ಪ್ರಯತ್ನಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣ’ ಎಂದುಪಾಕಿಸ್ತಾನ ರೈಲ್ವೆ ವಕ್ತಾರರು ಹೇಳಿದ್ದಾರೆ.
‘ಅಪಘಾತದಲ್ಲಿಗಂಭೀರವಾಗಿ ಗಾಯಗೊಂಡಿರುವ 60ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಸುಕ್ಕೂರ್ ಪೊಲೀಸ್ ಆಯುಕ್ತ ಶಫೀಕ್ ಅಹ್ಮದ್ ಮಹೇಸರ್ ಸ್ಪಷ್ಟಪಡಿಸಿದ್ದಾರೆ.
‘ಇದೊಂದು ಭಯಾನಕ ಅಪಘಾತ.ರೈಲು ಗುದ್ದಿದ ರಭಸಕ್ಕೆ ಬಸ್ ಮೂರು ಭಾಗಗಳಾಗಿ ಚದುರಿಹೋಗಿವೆ. ಅಲ್ಲದೇ, ಸುಮಾರು 150-200 ಅಡಿಗಳಷ್ಟು ದೂರ ಬಸ್ಸನ್ನು, ರೈಲು ಎಳೆದುಕೊಂಡು ಹೋಗಿದೆ.ಅಪಘಾತದಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಅಪಘಾತದಿಂದಾಗಿ ರೈಲಿನ ಎಂಜಿನ್ಗೆ ಹಾನಿಯಾಗಿದೆ. ರೈಲಿನ ಸಹಾಯಕ ಚಾಲಕ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.