ADVERTISEMENT

ಗ್ರೆನೇಡ್‌ ದಾಳಿ ಪ್ರಕರಣ: ಬಾಂಗ್ಲಾ ಮಾಜಿ ಪ್ರಧಾನಿ ಖಾಲೀದಾ ಜಿಯಾ ಪುತ್ರನ ಖುಲಾಸೆ

ಪಿಟಿಐ
Published 1 ಡಿಸೆಂಬರ್ 2024, 13:40 IST
Last Updated 1 ಡಿಸೆಂಬರ್ 2024, 13:40 IST
<div class="paragraphs"><p>ಖಾಲೀದಾ ಜಿಯಾ</p></div>

ಖಾಲೀದಾ ಜಿಯಾ

   

ಢಾಕಾ: 2004ರಲ್ಲಿ ನಡೆದ ಗ್ರೆನೇಡ್‌ ದಾಳಿ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರ ಪುತ್ರ ತಾರಿಕ್‌ ರೆಹಮಾನ್‌ ಸೇರಿದಂತೆ ಎಲ್ಲರನ್ನೂ ಹೈಕೋರ್ಟ್‌ ಖುಲಾಸೆಗೊಳಿಸಿದೆ. 

‘ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಭಾನುವಾರ ರದ್ದುಗೊಳಿಸಿದ್ದು, ತಾರಿಕ್ ಸೇರಿದಂತೆ ಎಲ್ಲರನ್ನೂ ಖುಲಾಸೆಗೊಳಿಸಿದೆ’ ಎಂದು ಅಟಾರ್ನಿ ಜನರಲ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ. 57 ವರ್ಷದ ತಾರಿಕ್‌ ಅವರು ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿಯ (ಬಿಎನ್‌ಪಿ) ಹಂಗಾಮಿ ಮುಖ್ಯಸ್ಥರಾಗಿದ್ದು, ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ. 

ADVERTISEMENT

ನ್ಯಾಯಮೂರ್ತಿಗಳಾದ ಎ.ಕೆ.ಎಂ ಅಬ್ದುಝ್ಝಮಾನ್ ಮತ್ತು ಸೈಯದ್ ಇನಾಯತ್ ಹೊಸೇನ್‌ ಅವರನ್ನೊಳಗೊಂಡ ಪೀಠವು, ವಿಚಾರಣಾ ನ್ಯಾಯಾಲದ ತೀರ್ಪನ್ನು ‘ಕಾನೂನುಬಾಹಿರ’ ಎಂದು ಘೋಷಿಸಿತು. ಎಲ್ಲ 49 ಅರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಪ್ರಕಟಿಸಿತು.

ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಅವರು ವಿರೋಧ ಪಕ್ಷದ ನಾಯಕಿಯಾಗಿದ್ದ ಅವಧಿಯಲ್ಲಿ 2004ರ ಆಗಸ್ಟ್‌ 21ರಂದು ಆಯೋಜಿಸಿದ್ದ ರ್‍ಯಾಲಿಯನ್ನು ಗುರಿಯಾಗಿಸಿ ಗ್ರೆನೇಡ್‌ ದಾಳಿ ನಡೆದಿತ್ತು. ಘಟನೆಯಲ್ಲಿ 24 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಢಾಕಾದ ನ್ಯಾಯಾಲಯವು 19 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ, ತಾರಿಕ್‌ ಸೇರಿದಂತೆ ಇತರ 19 ಮಂದಿಯನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಇನ್ನುಳಿದ 11 ಆರೋಪಿಗಳಿಗೆ ವಿವಿಧ ಅವಧಿಯ ಜೈಲು ಶಿಕ್ಷೆ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.