ಕರಾಚಿ/ಇಸ್ಲಾಮಾಬಾದ್(ರಾಯಿಟರ್ಸ್): ಹಿಂದು ಸಮುದಾಯದ ಪ್ರಾಂಶುಪಾಲರೊಬ್ಬರು ಧರ್ಮನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದಲ್ಲಿ ಶಾಲೆ ಮತ್ತು ಹಿಂದು ದೇವಸ್ಥಾನದ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ನಡೆದಿದ್ದುಅಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಆತಂಕ ಮೂಡುವ ಮತ್ತೊಂದು ಪ್ರಕರಣ ಇದಾಗಿದೆ.
ಪ್ರವಾದಿ ಮಹಮ್ಮದ್ ಕುರಿತಾಗಿ ಹಿಂದು ಪ್ರಾಂಶುಪಾಲರೊಬ್ಬರು ಟೀಕಿಸುತ್ತ ಧರ್ಮನಿಂದನೆ ಮಾಡಿರುವುದಾಗಿ ಸಿಂಧ್ ಪ್ರಾಂತ್ಯದಲ್ಲಿ ವಿದ್ಯಾರ್ಥಿಯೊಬ್ಬ ಆರೋಪಿಸಿದ್ದ. ಇದರಿಂದ ಕುಪಿತಗೊಂಡ ಜನರ ತಂಡವು ಶಾಲೆ ಮತ್ತು ಸಮೀಪದ ದೇವಸ್ಥಾನದ ಮೇಲೆ ದಾಳಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ರಕ್ಷಣೆಯ ದೃಷ್ಟಿಯಿಂದ ಪ್ರಾಂಶುಪಾಲರನ್ನು ವಶಕ್ಕೆ ಪಡೆಯಲಾಗಿದೆ. ಧರ್ಮನಿಂದನೆ ಮತ್ತು ದಾಳಿಯ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಾಂಶುಪಾಲರು ಉದ್ದೇಶಪೂರ್ವಕವಾಗಿ ಯಾವುದೇ ನಿಂದನೆ ಮಾಡಿರುವಂತೆ ಕಾಣುವುದಿಲ್ಲ ಎಂದು ಪೊಲೀಸ್ ಮುಖ್ಯ ಅಧಿಕಾರಿ ಫಾರುಕ್ಆಲಿ ಹೇಳಿದ್ದಾರೆ.
ಪ್ರವಾದಿ ಮಹಮ್ಮದ್ ಅವರ ನಿಂದನೆ ಮಾಡಿದಲ್ಲಿ ಮರಣದಂಡನೆಯನ್ನು ವಿಧಿಸುವ ಕಾನೂನು ಪಾಕಿಸ್ತಾನದಲ್ಲಿದೆ. ಜಗತ್ತಿನಲ್ಲಿಯೇ ಧರ್ಮನಿಂದನೆ ಕುರಿತು ಪಾಕ್ನಲ್ಲಿ ಕಠಿಣ ನಿಯಮಗಳಿವೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.