ಬೀಜಿಂಗ್: ಬಿಗಡಾಯಿಸಿರುವ ಭಾರತ ಮತ್ತು ಚೀನಾ ನಡುವಿನ ಸಂಬಂಧದ ಸುಧಾರಣೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನೀಡಿರುವ ಸಲಹೆಗಳನ್ನು ಗಮನಿಸಲಾಗಿದೆ ಎಂದಿರುವ ಚೀನಾ, ಅವರ ಹೇಳಿಕೆಗಳನ್ನು ಗೌರವಿಸಲಾಗುವುದು ಎಂದಿದೆ.
‘ಜೈಶಂಕರ್ ಅವರ ಹೇಳಿಕೆಗಳನ್ನು ಗಮನಿಸಿದ್ದೇವೆ. ಭಾರತ ಮತ್ತು ಚೀನಾ ನಡುವಿನ ಸಂಬಂಧದ ಪ್ರಾಮುಖ್ಯದ ಬಗ್ಗೆ ಅವರು ಒತ್ತಿ ಹೇಳಿದ್ದಾರೆ. ಚೀನಾ ಜೊತೆಗಿನ ಸಂಬಂಧದ ಪ್ರಾಮುಖ್ಯದ ಬಗ್ಗೆ ಭಾರತವು ಆಸಕ್ತಿ ಹೊಂದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಇದನ್ನು ನಾವು ಮೆಚ್ಚುತ್ತೇವೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾ ಲಿಜಿಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಇದೇ ವೇಳೆ, ಗಡಿ ವಿವಾದವನ್ನು ಒಟ್ಟಾರೆ ದ್ವಿಪಕ್ಷೀಯ ಸಂಬಂಧಕ್ಕೆ ಜೋಡಿಸಬಾರದು ಎಂದು ನಾವು ಆಗ್ರಹಿಸುತ್ತೇವೆ. ಹಲವು ವರ್ಷಗಳಿಂದ ನಾವು ಪಡೆದ ಪ್ರಮುಖ ಅನುಭವ ಇದಾಗಿದೆ. ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ, ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಭಾರತವು ನಮ್ಮ ಜೊತೆ ಕೈಜೋಡಿಸಲಿದೆ ಎನ್ನುವ ಭರವಸೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.