ವಾಷಿಂಗ್ಟನ್: ‘ಭಾರತ– ಚೀನಾದ ಗಡಿಯಲ್ಲಿ ಚೀನಿ ಸೈನಿಕರು ನಡೆಸಿದ ಆಕ್ರಮಣಕಾರಿ ಸಂಘರ್ಷ ಹಾಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಆ ದೇಶ ತಳೆದಿರುವ ನಿಲುವುಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಚಿಂತನೆ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯಾನ್ ಹೇಳಿದ್ದಾರೆ.
‘ಭಾರತದ ವಿರುದ್ಧ ಚೀನಾ ಆಕ್ರಮಣಕಾರಿ ಮನೋಭಾವ ತಾಳಿದೆ. ಲಡಾಖ್ನಲ್ಲಿ ನಡೆದ ಸಂಘರ್ಷದಲ್ಲಿ ಗಾಯಗೊಂಡ ಕೆಲವು ಭಾರತೀಯ ಸೈನಿಕರ ದೇಹಗಳು ಗುರುತಿಸಲಾಗದ ಮಟ್ಟಿಗೆ ಛಿದ್ರವಾಗಿದ್ದವು. ತಾನು ಎಂಥ ರಾಷ್ಟ್ರ ಎಂಬುದನ್ನು ಚೀನಾ ಈ ಘಟನೆಯ ಮೂಲಕ ತಿಳಿಸಿಕೊಟ್ಟಿದೆ ಎಂದು ಅವರು ಫಾಕ್ಸ್ ನ್ಯೂಸ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತ– ಅಮೆರಿಕ ಸಂಬಂಧಗಳನ್ನು ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ‘ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಅಮೆರಿಕದ ದೊಡ್ಡ ಮಿತ್ರ. ನಮ್ಮಲ್ಲಿ ಅನೇಕ ಸಮಾನತೆಗಳಿವೆ. ಎರಡೂ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವಿದೆ. ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಮಧ್ಯೆ ಅತ್ಯುತ್ತಮ ಸ್ನೇಹವಿದೆ’ ಎಂದರು.
ಆದರೆ, ಚೀನಾ ದಕ್ಷಿಣ ಚೀನಾ ಸಮುದ್ರ ಹಾಗೂ ಹಾಂಗ್ಕಾಂಗ್ನಲ್ಲಿ ವರ್ತಿಸಿದಂತೆ ಭಾರತದ ಜತೆಗೂ ವರ್ತಿಸುತ್ತಿದೆ. ತೈವಾನ್ ವಿರುದ್ಧವೂ ಬುಸುಗುಡುತ್ತಿದೆ. ಇವೆಲ್ಲವೂ ಕಮ್ಯುನಿಸ್ಟ್ ಪಕ್ಷದ ಚಿಂತನೆ ಹೇಗಿದೆ ಎಂಬುದನ್ನು ತೋರಿಸುತ್ತದೆ. ಈ ಆಕ್ರಮಣ ಶೀಲತೆಯು ಆತಂಕ ಮೂಡಿಸುವಂಥದ್ದು ಎಂದು ಒ’ಬ್ರಿಯಾನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.