ರಿಯಾದ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಭಾರತಕ್ಕೆ ಪ್ರಬಲವಾದ ಕಾರಣಗಳಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೌದಿ ಅರೇಬಿಯಾದಲ್ಲಿ ಹೇಳಿದ್ದಾರೆ.
ವಿದೇಶಾಂಗ ಸಚಿವರಾದ ಬಳಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಭೇಟಿ ನೀಡಿರುವ ಅವರು ಅಲ್ಲಿಯ ಸುದ್ದಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ‘ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಐದನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿದೆ. ಜೊತೆಗೆ, ಪರಮಾಣು ಶಕ್ತಿ, ತಂತ್ರಜ್ಞಾನದ ಕೇಂದ್ರ ಸ್ಥಾನ ಮತ್ತು ಜಾಗತಿಕವಾಗಿ ಪಾಲ್ಗೊಳ್ಳುವಿಕೆಯಂಥ ಅಂಶಗಳು ಭಾರತವು ವಿಶ್ವಸಂಸ್ಥೆಯ ಖಾಯಂ ಸದಸ್ಯನಾಗಲು ಅರ್ಹತೆಯನ್ನು ನೀಡಿದೆ. ಅಂತರರಾಷ್ಟ್ರೀಯ ಭದ್ರತೆಯನ್ನು ಕಾಪಾಡುವುದು ಮಾತ್ರ ಭದ್ರತಾ ಮಂಡಳಿಯ ಉದ್ದೇಶವಲ್ಲ, ಎಲ್ಲಾ ಸಮಯದಲ್ಲೂ ಪ್ರಸ್ತುತವಾಗಿ ಉಳಿಯುವುದೂ ಅದರ ಉದ್ದೇಶವಾಗಿರಬೇಕು’ ಎಂದರು.
ಭದ್ರತಾ ಮಂಡಳಿಯು ಪ್ರಪಂಚದ ನಿಜಸ್ಥಿತಿಯನ್ನು ಪ್ರತಿಫಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಭದ್ರತಾ ಮಂಡಳಿಗೆ ಸುಧಾರಣೆ ತರಲು ಜಾಗತಿಕ ಮಟ್ಟದಲ್ಲಿ ಹೊಂದಾಣಿಕೆ ಅಗತ್ಯವಿದೆ ಎಂದು ಅವರು ಸಂದರ್ಶನದಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.