ADVERTISEMENT

ಮ್ಯಾನ್ಮಾರ್‌ನಲ್ಲಿ ತೀವ್ರಗೊಂಡ ಜನಾಕ್ರೋಶ: ಭದ್ರತಾ ಪಡೆಗಳ ಗುಂಡಿಗೆ 38 ಬಲಿ

:

ಏಜೆನ್ಸೀಸ್
Published 4 ಮಾರ್ಚ್ 2021, 12:56 IST
Last Updated 4 ಮಾರ್ಚ್ 2021, 12:56 IST
ಮ್ಯಾನ್ಮಾರ್‌ನ ಸೇನಾದಂಗೆ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಮಹಿಳೆಯೊಬ್ಬರ ಶವಯಾತ್ರೆ ಸಂದರ್ಭದಲ್ಲಿ ಗುರುವಾರ ಮ್ಯಾಂಡಲೇ ನಗರದಲ್ಲಿ ಸೇರಿದ್ದ ಜನಸಮೂಹ
ಮ್ಯಾನ್ಮಾರ್‌ನ ಸೇನಾದಂಗೆ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಮಹಿಳೆಯೊಬ್ಬರ ಶವಯಾತ್ರೆ ಸಂದರ್ಭದಲ್ಲಿ ಗುರುವಾರ ಮ್ಯಾಂಡಲೇ ನಗರದಲ್ಲಿ ಸೇರಿದ್ದ ಜನಸಮೂಹ   

ನೇ ಪೈ ಟೌ, ಮ್ಯಾನ್ಮಾರ್: ಮ್ಯಾನ್ಮಾರ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಸೇನಾ ದಂಗೆ ವಿರುದ್ಧ ಜನರ ಪ್ರತಿಭಟನೆ ತೀವ್ರಗೊಂಡಿದ್ದು, ಜನರು ಬೀದಿಗೆ ಬಂದಿದ್ದಾರೆ. ಭದ್ರತಾ ಪಡೆಗಳು, ಪೊಲೀಸರ ಗುಂಡಿಗೆ ಕನಿಷ್ಠ 38 ಮಂದಿ ಮೃತಪಟ್ಟಿದ್ದರೂ, ಜನರು ಗುಂಡಿಗೆ ಹೆದರದೆ ಮುನ್ನುಗ್ಗಿದ್ದಾರೆ.

ದೇಶದ ಅತಿದೊಡ್ಡ ನಗರವಾದ ಯಂಗೋನ್‌ನ ಮೂರು ಕಡೆ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು, ಭದ್ರತಾ ಪಡೆಗಳ ಯತ್ನ ವಿಫಲವಾಗಿದ್ದು, ನಾಗರಿಕರು ಪೊಲೀಸರ ಗುಂಡಿಗೂ ಜಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.

ಮ್ಯಾಂಡಲೇ ನಗರದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ. ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಕ್ರಿಸ್ಟೈನ್‌ ಸ್ಕ್ಯಾನೆರ್ ಬರ್ಗನರ್ ಅವರು, ಬುಧವಾರ ಕನಿಷ್ಠ 38 ಜನರು ಸತ್ತಿರದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಸೇನಾದಂಗೆ ವಿರುದ್ಧ ಪ್ರತಿಭಟನೆ ಆರಂಭಗೊಂಡಂತೆ ಕಳೆದ ಫೆಬ್ರುವರಿ 1ಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಇದು ಅತ್ಯಧಿಕ. ಈವರೆಗೆ ಕನಿಷ್ಠ 50 ಮಂದಿ ಸತ್ತಿದ್ದಾರೆ. ಇವರೆಲ್ಲರೂ, ಬಹುತೇಕ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರು ಎನ್ನಲಾಗಿದೆ.

ಮ್ಯಾನ್ಮಾರ್‌ನಲ್ಲಿ ಸೇನಾ ಅಧಿಕಾರವನ್ನು ಅಂತ್ಯಗೊಳಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಅವರೂ ಒತ್ತಾಯಿಸಿದ್ದಾರೆ.

ಎರಡು ಶಾಶ್ವತ ಸದಸ್ಯ ರಾಷ್ಟ್ರಗಳಾದ ಚೀನಾ ಮತ್ತು ರಷ್ಯಾ ತಳೆದಿರುವ ನಿಲುವಿನಲ್ಲಿ ವಿಶ್ವಸಂಸ್ಥೆಯು ಒಟ್ಟಾಗಿ ಯಾವುದೇ ನಿಲುವು ತಳೆಯುವುದು ಕಷ್ಟ. ಈ ಮಧ್ಯೆ ವಿವಿಧ ದೇಶಗಳು ತಾವೇ ವಿಧಿಸಿದ್ದ ನಿರ್ಬಂಧ ನಿರ್ಧಾರವನ್ನು ಮರುಪರಿಶೀಲಿಸುತ್ತಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯು ಶುಕ್ರವಾರ ನಡೆಯುವ ಸಾಧ್ಯತೆ ಇದೆ. ಮ್ಯಾನ್ಮಾರ್‌ನಲ್ಲಿ ಬಿಕ್ಕಟ್ಟು ಬಗೆಹರಿಸುವಂತೆ ಅಂತರರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡವೂ ಹೆಚ್ಚಾಗಿರುವುದರಿಂದ ಈ ಸಭೆಯು ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.